ಬೆಂಗಳೂರು ಎಲ್ಲರಿಗೂ ಸೇಫ್; ಪ್ಲೀಸ್ ಅಪಪ್ರಚಾರ ಮಾಡ್ಬೇಡಿ; ಪರಂ
Team Udayavani, Jan 5, 2017, 12:24 PM IST
ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ನಡೆದ ಲೈಂಗಿಕ ದೌರ್ಜನ್ಯ ಘಟನೆ ನಿಜಕ್ಕೂ ದುರದೃಷ್ಟಕರ. ಹಾಗಾಗಿ ಹೊಸ ವರ್ಷದ ಆರಂಭವೇ ಮೋಡ ಕವಿದ ವಾತಾವರಣದ ರೀತಿ ಆಗಿದೆ. ರಾಜ್ಯದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದು ನಮ್ಮ ಆದ್ಯತೆ. ಬೆಂಗಳೂರು ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರಿಗೂ ಸೇಫ್ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಹೊಸ ವರ್ಷಾಚರಣೆಯಂದು ನಗರದ ಬ್ರಿಗೇಡ್ ರಸ್ತೆ ಮತ್ತು ಕಮ್ಮನಹಳ್ಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಳೆಯರು, ಮಕ್ಕಳ ಮೇಲಿನ ಇಂತಹ ಘಟನೆಯಿಂದ ಬೆಂಗಳೂರಿನ ಚಿತ್ರಣ ಬದಲಾಗಬಹುದು. ಆದರೆ ಬೆಂಗಳೂರಿನ ಚಿತ್ರಣ ಬದಲಾಗಲು ಬಿಡಲೇಬಾರದು. ಇದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಆಗಿದೆ ಎಂದು ಹೇಳಿದರು.
ಪ್ರಕರಣ ಸಂಬಂಧ ನಾನು ನೀಡಿದ್ದ ಹೇಳಿಕೆ ತಿರುಚಲಾಗಿದೆ. ನಾನು ಯಾಕೆ ಹೇಳಿದೆ ಎಂಬ ಉದ್ದೇಶವನ್ನೇ ತಿರುಚಲಾಗಿದೆ. 1500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಿದ್ದೇವು. ಹೀಗಿದ್ದರೂ ಬೆಂಗಳೂರು ನಗರದ ಬಗ್ಗೆ ಅಪಪ್ರಚಾರ ತಪ್ಪು ಎಂದರು. ಬೆಂಗಳೂರನ್ನು ಬೇರೆ ರೀತಿ ತೋರಿಸುವ ಕೆಲಸವಾಗಬಾರದು ಎಂದು ಹೇಳುವ ಮೂಲಕ ದೃಶ್ಯ ಮಾಧ್ಯಮಗಳಿಗೆ ಪರೋಕ್ಷವಾಗಿ ಕಿವಿಮಾತು ಹೇಳಿದರು.