ಖೂಬಾಗೆ ಖಂಡ್ರೆ ಚಿಂತೆ, ಖಂಡ್ರೆಗೆ ಮೋದಿ ಕಾಟ!
Team Udayavani, Mar 20, 2019, 2:16 AM IST
ಬೀದರ: ಲೋಕಸಭೆ ಚುನಾವಣೆಯಲ್ಲಿ ಹಾಲಿ ಸಂಸದ ಭಗವಂತ ಖೂಬಾ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರದೇ ಚಿಂತೆಯಾಗಿದ್ದು, ಈಶ್ವರ ಖಂಡ್ರೆ ಅವರಿಗೆ ಪ್ರಧಾನಿ ಮೋದಿ ಹವಾದ ಭಯ ಶುರುವಾಗಿದೆ.
ಬೀದರ್ ಕ್ಷೇತ್ರದಲ್ಲಿ ಸದ್ಯ ಬಿಜೆಪಿ ಸಂಸದರಿದ್ದು , ಶತಾಯಗತಾಯ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಸ್ಥಾನ ಪಡೆದುಕೊಳ್ಳುವ ತವಕದಲ್ಲಿರುವ ಈಶ್ವರ ಖಂಡ್ರೆ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 6 ಸ್ಥಾನಗಳ ಪೈಕಿ 4 ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಗಳಿಸಿತ್ತು. ಜೆಡಿಎಸ್, ಬಿಜೆಪಿ ತಲಾ ಒಂದು ಸ್ಥಾನ ಪಡೆದುಕೊಂಡಿದ್ದು, ಮೈತ್ರಿ ಸರ್ಕಾರ ರಚನೆಯಾದ ನಂತರ ಕಾಂಗ್ರೆಸ್ನ ಇಬ್ಬರು, ಜೆಡಿಎಸ್ನ ಒಬ್ಬ ಶಾಸಕರು ಸಚಿವರಾಗಿದ್ದಾರೆ. ಅಲ್ಲದೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಕೂಡ ಜಿಲ್ಲೆಗೆ ದಕ್ಕಿರುವ ಹಿನ್ನೆಲೆಯಲ್ಲಿ ಮೂವರು ಸಚಿವರು ಹಾಗೂ ಕಾಂಗ್ರೆಸ್ ಕಾರ್ಯಾಧ್ಯಕ್ಷರಿಗೆ ಚುನಾವಣೆ ಸವಾಲಾಗಿದೆ.
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ ಗಳಿಸದಿದ್ದರೆ ಜಿಲ್ಲೆಯ ಮೂವರು ಸಚಿವರು, ಕಾರ್ಯಾಧ್ಯಕ್ಷರು ಮುಖ ಭಂಗ ಎದುರಿಸಬೇಕಾಗುತ್ತದೆಂಬ ನಿಟ್ಟಿನಲ್ಲಿ ಪಕ್ಷದ ಮುಖಂಡರು ಚುನಾವಣೆಯ ರಣತಂತ್ರ ಹೆಣೆಯುವಲ್ಲಿ ಡಗಿದ್ದಾರೆ. ಹಾಗಂತ ಚುನಾವಣೆಯನ್ನು ಯಾವುದೇ ಪಕ್ಷ ಸುಲಭವಾಗಿ ಗೆಲ್ಲುತ್ತದೆಂದು ಹೇಳುವಂತಿಲ್ಲ. ಕಾಂಗ್ರೆಸ್ಗೆ ಮೋದಿ ಹವಾ ಭಯ ಕೂಡ ಶುರುವಾಗಿದ್ದು, ಎರಡನೇ ಸರ್ಜಿಕಲ್ ಸ್ಟ್ರೆ „ಕ್ ಮೂಲಕ ಮತ್ತೆ ಮೋದಿ ಗಾಳಿ ಬೀಸುತ್ತಿದೆ.
ಇದನ್ನು ಹೇಗೆ ತಡೆಯಬೇಕೆಂಬ ಲೆಕ್ಕಾಚಾರ ಕಾಂಗ್ರೆಸ್ ಮುಖಂಡರಿಗೆ ತಲೆನೋವಾಗಿದೆ.
ಬಿಜೆಪಿ ಸಿದ್ಧತೆ ಜೋರು: ಯಾವುದೇ ಚುನಾವಣೆ ಎದುರಿಸದ ಭಗವಂತ ಖೂಬಾ ಕಳೆದ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಮೋದಿ ಅಲೆಯಲ್ಲಿ ಜಯ ಗಳಿಸಿದ್ದರು. ಈ ಬಾರಿಯೂ ಅದೇ ನಂಬಿಕೆಯಲ್ಲಿದ್ದಾರೆ. ಅಲ್ಲದೆ, ಹೊಸ ರೈಲುಗಳ ಸಂಚಾರ, ಹೆದ್ದಾರಿ ಕಾಮಗಾರಿ ಸೇರಿ ವಿವಿಧ ಅಭಿವೃದ್ದಿ ಕಾರ್ಯಗಳ ಸಾಧನೆ ಯೊಂದಿಗೆ ಜನರ ಬಳಿಗೆ ತೆರಳಿ ಮತ ಕೇಳಲು ಬಿಜೆಪಿ ಸಿದಟಛಿತೆ ನಡೆಸಿದೆ.
ಭಗವಂತ ಖೂಬಾ ಹಾಗೂ ಈಶ್ವರ ಖಂಡ್ರೆ ಇಬ್ಬರೂ ಲಿಂಗಾಯತ ಸಮಯದಾಯಕ್ಕೆ ಸೇರಿದವರಾಗಿದ್ದು, ಕಾಂಗ್ರೆಸ್ನಿಂದ ಈಶ್ವರ ಖಂಡ್ರೆ ಸ್ಪರ್ಧೆ ನಡೆಸಿದರೆ ಚುನಾವಣೆ ಸುಲಭ ಅಲ್ಲ ಎಂಬ ಚರ್ಚೆ ಬಿಜೆಪಿಯಲ್ಲಿ ಶುರುವಾಗಿದೆ. ಜಿಲ್ಲೆಯಲ್ಲಿ ಪ್ರಭಾವಿ ನಾಯಕ ಎಂದು ಗುರುತಿಸಿಕೊಂಡಿರುವ ಈಶ್ವರ ಖಂಡ್ರೆ, ಚುನಾವಣೆಯಲ್ಲಿ ಜಯಳಿಸುವುದು ಸುಲಭ ಎನ್ನುತ್ತಾರೆ ಕಾಂಗ್ರೆಸ್ ಪಕ್ಷದವರು. ಆದರೆ, ಮೋದಿ ಬಿರುಗಾಳಿಗೆ ವಿರೋಧ ಪಕ್ಷದವರ ಸೋಲು ನಿಶ್ಚಿತ ಎನ್ನುತ್ತಾರೆ ಬಿಜೆಪಿಯವರು.
ಮುಖಂಡರ ಭೇಟಿ ಸಾಧ್ಯತೆ ಕಳೆದ ಲೋಕಸಭೆ ಚುನಾವಣೆಯಿಂದ ಈವರೆಗೆ ಪ್ರಧಾನಿ ಮೋದಿ ಅಧಿಕೃತವಾಗಿ ಬೀದರ್
ಜಿಲ್ಲೆಗೆ 3 ಬಾರಿ ಭೇಟಿ ನೀಡಿದ್ದಾರೆ. ಅಲ್ಲದೇ ಎರಡು ಬಾರಿ ಬೇರೆ ಕಡೆಗೆ ತೆರಳುವ ಮಧ್ಯೆ ಬೀದರ್ ವಾಯುನೆಲೆಗೆ ಭೇಟಿ ನೀಡಿದ್ದಾರೆ. ಅದೇ ರೀತಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ 5 ವರ್ಷದಲ್ಲಿ ಮೂರು ಬಾರಿ ಭೇಟಿ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಯೋಗಿ ಆದಿತ್ಯನಾಥ್, ನಿತಿನ್ ಗಡ್ಕರಿ, ಪ್ರಕಾಶ ಜಾವಡೇಕರ್ ಸೇರಿ ಕೇಂದ್ರದ
ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಇದೀಗ ಲೋಕಸಭೆ ಚುನಾವಣೆಯಲ್ಲೂ ಎರಡೂ ಪಕ್ಷದ ರಾಷ್ಟ್ರೀಯ ನಾಯಕರು ಜಿಲ್ಲೆಗೆ ಭೇಟಿ ನೀಡಿ ಮತ ಬೇಟೆ ನಡೆಸುವ ಸಾಧ್ಯತೆ ಇದೆ.