ಬಿಜೆಪಿಯಿಂದ ನ್ಯಾಯಾಂಗದ ಮೇಲೆ ಆಕ್ರಮಣ ನಡೆಯುತ್ತಿದೆ: ಅಭಿಷೇಕ್ ಮನು ಸಿಂಘ್ವಿ
Team Udayavani, Jul 6, 2022, 5:14 PM IST
ಬೆಂಗಳೂರು: ನ್ಯಾಯಾಂಗದ ಮೇಲೆ ಆಕ್ರಮಣ ನಡೆಯುತ್ತಿದೆ.ಇದನ್ನು ನಾವು ಖಂಡಿಸುತ್ತೇವೆ. ಕರ್ನಾಟಕದ ಹಾಲಿ ನ್ಯಾಯಾಧೀಶರೇ ಆಡಳಿತ ವೈಖರಿಯನ್ನು ವಿಶ್ಲೇಷಿಸಿದ್ದಾರೆ ಎಂದು ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಅಭಿಷೇಕ್ ಮನು ಸಿಂಘ್ವಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ವಿ.ಆರ್ ಸುದರ್ಶನ್, ಬಿ.ಎಲ್ ಶಂಕರ್, ದಿನೇಶ್ ಗೂಳಿಗೌಡ ಉಪಸ್ಥಿತರಿದ್ದರು.
ಅಭಿಷೇಕ್ ಮನು ಸಿಂಘ್ವಿ ಮಾತನಾಡಿ, ನ್ಯಾಯಾಧೀಶರ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆದಿದೆ. ಇದು ನೈತಿಕತೆ ಕುಗ್ಗಿಸುವ ಪ್ರಯತ್ನವಾಗಿದೆ.ಉದಯಪುರ ಹತ್ಯೆ ಆರೋಪಿಗಳು ಹಾಗೂ ಕಾಶ್ಮೀರದಲ್ಲಿ ಸಿಕ್ಕಿಬಿದ್ದ ಉಗ್ರ ಬಿಜೆಪಿಯ ಸದಸ್ಯರಾಗಿದ್ದಾರೆ. ನೂಪುರ್ ಶರ್ಮಾ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಬಿಜೆಪಿ ಟ್ರೋಲ್ ಗುಂಪುಗಳು ಸುಪ್ರೀಂಕೋರ್ಟ್ ವಿರುದ್ಧವೇ ತಿರುಗಿಬಿದ್ದಿವೆ. ಸುಪ್ರೀಂಕೋರ್ಟ್ ನ್ಯಾಯಾಧೀಶರ ವಿರುದ್ಧ ಕೀಳಾಗಿ ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಿರುದ್ಧವೇ ಪ್ರಧಾನಿ ಕಚೇರಿ ಸೂಚನೆಯಂತೆ ಕೆಲವರಿಂದ ಪತ್ರವನ್ನು ಬರೆಸಲಾಗಿದೆ ಎಂದರು.
ಬಿಜೆಪಿಯ ಸಾಮಾಜಿಕ ಜಾಲತಾಣದ ಸೈನಿಕರು ಸುಳ್ಳನ್ನು ಸತ್ಯ ಮಾಡುತ್ತಾರೆ. ಸತ್ಯವನ್ನು ಸುಳ್ಳುಮಾಡುತ್ತಾರೆ. ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದ್ದಾರೆ. ನ್ಯಾಯಾಲಯ ಅಭಿಪ್ರಾಯ ನೀಡಬಹುದು. ಪ್ರತಿ ದಿನವೂ ಅಭಿಪ್ರಾಯ ನೀಡುತ್ತದೆ, ಅದನ್ನೇ ನೂಪುರ್ ಶರ್ಮ ಪ್ರಕರಣದಲ್ಲೂ ಹೇಳಿದೆ. ಬಿಜೆಪಿಗೆ ಮರ್ಯಾದೆಯೇ ಇಲ್ಲ. ನ್ಯಾಯಾಧೀಶರದ್ದೇ ತಪ್ಪು ಎಂದು ಟ್ರೋಲ್ ಮಾಡಿದರು. ರಾಜಧರ್ಮ, ಲಕ್ಷ್ಮಣ ರೇಖೆ ಅರಿಯಬೇಕಿತ್ತು. ಈ ಬೆಳವಣಿಗೆಯನ್ನು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ. ಬಿಜೆಪಿಯನ್ನು ಎಕ್ಸ್ಪೋಸ್ ಮಾಡುತ್ತೇವೆ. ನೂಪುರ್ ಶರ್ಮ ಪ್ರಕರಣದಲ್ಲಿ ಸಚಿವರೆಲ್ಲ ಮೌನ ವಹಿಸಿದ್ದಾರೆ. ಬಿಜೆಪಿ ನಾಯಕರು ಸುಮ್ಮನೆ ಕುಳಿತಿದ್ದಾರೆ ಎಂದು ಕಿಡಿ ಕಾರಿದರು.