ಡೈರಿ ಪ್ರಕರಣ ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ
Team Udayavani, Mar 2, 2017, 3:50 AM IST
ಬೆಂಗಳೂರು: ಕಾಂಗ್ರೆಸ್ನ ಗೋವಿಂದ ರಾಜು ಹಾಗೂ ಬಿಜೆಪಿಯ ಲೆಹರ್ ಸಿಂಗ್ ಡೈರಿಗಳ ಬಗ್ಗೆ ರಾಜ್ಯ ಸರ್ಕಾರ ಸಿಬಿಐ
ತನಿಖೆಗೆ ಶಿಫಾರಸು ಮಾಡಲಿ ಎಂದು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ ನಾರಾಯಣ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಲೆಹರ್ ಸಿಂಗ್ ಅವರ ಡೈರಿ ನಕಲಿ ಎಂದಾದರೆ, ಗೋವಿಂದರಾಜು ಅವರ ಡೈರಿಯೂ ನಕಲಿ ಎಂದು ಹೇಳುತ್ತಿರುವುದು
ಮಕ್ಕಳಾಟದಂತಿದೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಡೈರಿ ವಿಯಷದಲ್ಲಿ ವಿಚಲಿತರಾದಂತೆ ಕಾಣುತ್ತಿದ್ದಾರೆ. ಗೋವಿಂದರಾಜುಗೆ ಸಂಬಂಧಿಸಿದ ಡೈರಿಗೆ ಸಾಕಷ್ಟು ದಾಖಲೆಗಳಿದ್ದು, ಸ್ವತಃ ಗೋವಿಂದರಾಜು ಅವರೇ ಡೈರಿ ತಮ್ಮದೆಂದು ಒಪ್ಪಿಕೊಂಡು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದ್ದಾರೆ.
ಅಲ್ಲದೇ ಈ ಬಗ್ಗೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿ ತನಿಖೆಯೂ ಆರಂಭವಾಗಿದೆ. ಆದರೆ ಕಾಂಗ್ರೆಸ್ನವರು ಅದರಿಂದ ವಿಚಲಿತರಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಯಾವುದೋ ಸಂಬಂಧ ಇಲ್ಲದ ಮಾಹಿತಿ ತೆಗೆದುಕೊಂಡು ಬಂದು ಲೆಹರ್ ಸಿಂಗ್ ಅವರ ಡೈರಿ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು. ಎರಡೂ ಡೈರಿಯ ಸತ್ಯಾ ಸತ್ಯತೆಯ ಬಗ್ಗೆ ನಾಡಿನ ಜನತೆಗೆ ತಿಳಿಯಬೇಕಾದರೆ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಯಡಿಯೂರಪ್ಪ ದೇಶ ಕಂಡ ದೊಡ್ಡ ಭ್ರಷ್ಟ. ಹೇಳಿದ್ದನ್ನೇ ಪದೇ ಪದೇ ಹೇಳ್ತಾರೆ. ಗೋವಿಂದರಾಜು ಅವರು ಡೈರಿ ನಕಲಿ ಎಂದು
ಸ್ಪಷ್ಟಪಡಿಸಿರುವಾಗ ಮತ್ತೆ ಮತ್ತೆ ಅನಗತ್ಯ ಪ್ರಸ್ತಾಪ ಮಾಡಿ ಗೊಂದಲ ಮೂಡಿಸುತ್ತಿದ್ದಾರೆ. ಲೆಹರ್ ಸಿಂಗ್ ಡೈರಿ ಫೇಕ್ ಅನ್ನೋದಾದರೆ ಕಾಂಗ್ರೆಸ್ ಡೈರಿ ಸಹ ಫೇಕ್. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಇಮೇಜ್ಗೆ ಧಕ್ಕೆ ತರುವ ಷಡ್ಯಂತ್ರ ಇದರ ಹಿಂದೆ ಅಡಗಿದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ