ಸಿಎಂ ಕ್ಷಮೆಯಾಚನೆಗೆ ಬಿಜೆಪಿ ಪಟ್ಟು
Team Udayavani, Mar 4, 2019, 12:30 AM IST
ಭಾರತೀಯ ಸೈನಿಕರು ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಮಾಡಿದ ವೈಮಾನಿಕ ದಾಳಿ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ದಾಳಿ ಹಿನ್ನೆಲೆಯಲ್ಲಿ ಜನರ ಸಂಭ್ರಮದ ಬಗ್ಗೆ ಸಿಎಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಬಿಜೆಪಿಯ ಅರವಿಂದ ಲಿಂಬಾವಳಿ ಆರೋಪಿಸಿದ್ದು, ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಈ ಮಧ್ಯೆ ವಿಜಯಪುರದಲ್ಲಿ ಮಾತನಾಡಿದ ಸಿಎಂ ಎಚ್.ಡಿ.ಕುಮಾರಸ್ವಾಮಿ, ಭಾರತೀಯ ಸೈನಿಕರು ಗಡಿಯಲ್ಲಿ ನಿಂತು ತಮ್ಮ ಜೀವದ ಹಂಗು ತೊರೆದು ನಮಗೆಲ್ಲ ರಕ್ಷಣೆ ನೀಡುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ನಾವೆಲ್ಲ ಇಲ್ಲಿ ಕುಳಿತು ಅವರ ಕುರಿತು ಚರ್ಚಿಸುವುದು, ರಾಜಕೀಯ ಮಾಡುವುದು ಸರಿಯಲ್ಲ ಎಂದಿದ್ದಾರೆ. ಗೃಹ ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವೈಮಾನಿಕ ದಾಳಿ ಮಾಹಿತಿ ಬಹಿರಂಗಪಡಿಸುವಂತೆ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.
ಬೆಂಗಳೂರು: ಭಯೋತ್ಪಾದನೆ ವಿರುದ್ಧ ಭಾರತೀಯ ಸೇನೆ ನಡೆಸಿದ ದಾಳಿ ಹಿನ್ನೆಲೆಯಲ್ಲಿ ಜನರ ಸಂಭ್ರಮದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೊಣೆಗೇಡಿತನದಿಂದ ವಿವಾದಾತ್ಮಕ ಹೇಳಿಕೆ ನೀಡಿದ್ದು, ಕೂಡಲೇ ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ಶಾಸಕ ಅರವಿಂದ ಲಿಂಬಾವಳಿ ಒತ್ತಾಯಿಸಿದ್ದಾರೆ.
“ಭಯೋತ್ಪಾದನೆ ವಿರುದಟಛಿ ಹೋರಾಟಮಾಡುವುದು ಕಸಿವಿಸಿಯ ವಿಷಯ. ಭಯೋತ್ಪಾದಕರ ಅಡಗು ತಾಣಗಳನ್ನು ನಮ್ಮ ಸೈನಿಕರು ಧ್ವಂಸ ಮಾಡಿದ್ದನ್ನು ಜನ ಸಂಭ್ರಮಿಸುವುದು ಎರಡು ಕೋಮುಗಳ ನಡುವೆ ಸಾಮರಸ್ಯ ಕೆಡಿಸುತ್ತದೆ’ ಎಂಬುದಾಗಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಅವರ ದಿಕ್ಕು ತಪ್ಪಿದ ಆಲೋಚನೆಗೆ ಸಾಕ್ಷಿ. ತಮ್ಮ ಹೊಣೆಗೇಡಿ ಹೇಳಿಕೆಯಿಂದ ಸೈನಿಕರು, ಅಲ್ಪಸಂಖ್ಯಾತರಿಗೆ ಅವಮಾನ ಮಾಡಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಮ್ಮ ಜೀವದ ಹಂಗು ತೊರೆದು ಶತ್ರು ಪ್ರದೇಶ ಪ್ರವೇಶಿಸಿ ಬಾಂಬ್ ದಾಳಿ ನಡೆಸಿ ಜೈಶ್ ಉಗ್ರರ ಅಡಗು ತಾಣವನ್ನು ನೆಲಸಮ ಮಾಡಿದ ಸೈನಿಕರ ಸಾಹಸವನ್ನು ಜನರು ಸಂಭ್ರಮಿಸಬಾರದು ಎಂಬುದಾಗಿ ಮುಖ್ಯಮಂತ್ರಿ ತಾಕೀತು ಮಾಡುವ ವಿಕೃತ ಚಿಂತನೆಯ ಬಗ್ಗೆ ಅಚ್ಚರಿಯಾಗುತ್ತದೆ. ದೇಶದಲ್ಲಿ ಸೈನಿಕರ ಶೌರ್ಯವನ್ನು ಸಂಭ್ರಮಿಸಿದರೆ ಅಲ್ಪಸಂಖ್ಯಾತರು ಹಾಗೂ ಇತರರ ನಡುವೆ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ವ್ಯಾಖ್ಯಾನ ಮಾಡಿ ಅನಗತ್ಯವಾಗಿ ಅವರ ದೇಶ ಪ್ರೇಮದ ಮೇಲೆ ಸಂದೇಹಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಸೇನೆ ಹೋರಾಟದಲ್ಲಿ ರಾಜಕೀಯ ಬೇಡ
ವಿಜಯಪುರ: ಭಾರತೀಯ ವೀರ ಸೈನಿಕರು ದೇಶದ ಗಡಿಯಲ್ಲಿ ನಿಂತು ತಮ್ಮ ಜೀವದ ಹಂಗು ತೊರೆದು ನಮಗೆಲ್ಲ ರಕ್ಷಣೆ ನೀಡುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ನಾವೆಲ್ಲ ಇಲ್ಲಿ ಕುಳಿತು ಅವರ ಕುರಿತು ಚರ್ಚೆ ಮಾಡುವುದು, ಮಾತನಾಡುವುದು, ರಾಜಕೀಯ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಭಾನುವಾರ ಸೇವಾಲಾಲ್ ಜಯಂತಿಯಲ್ಲಿ ಪಾಲ್ಗೊಳ್ಳಲು ವಿಜಯಪುರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದ ರಕ್ಷಣೆ ಮಾಡುತ್ತಿರುವ ಸೈನಿಕರೇ ನಿಜವಾದ ರಕ್ಷಕರು. ಪಾಕ್ನಲ್ಲಿದ್ದ ಉಗ್ರರ ನೆಲೆಗಳ ಮೇಲೆ ಯಶಸ್ವಿ ಸರ್ಜಿಕಲ್ ದಾಳಿ ನಡೆಸಿರುವ ಯೋಧರ ಕಾರ್ಯ ಶ್ಲಾಘನೀಯ. ನಮ್ಮ ಸೈನಿಕರಿಗೆ ಇಂಥ ಸ್ಥಿತಿಯಲ್ಲಿ ಎಲ್ಲರೂ ಐಕ್ಯತೆಯಿಂದ ಮುಕ್ತ ಬೆಂಬಲ ನೀಡಬೇಕು. ಅನಗತ್ಯ ಚರ್ಚೆ ನಡೆಸಬಾರದು ಎಂದರು.
ವಿಡಿಯೋ ಸಾಕ್ಷಿ ಬಿಡುಗಡೆ ಮಾಡಿ
ಹುಬ್ಬಳ್ಳಿ: ಭಾರತೀಯ ವಾಯುಸೇನೆ ಯೋಧರು ತಮ್ಮ ಜೀವ ಪಣಕ್ಕಿಟ್ಟು ಉಗ್ರರ
ಮೇಲೆ ದಾಳಿ ಮಾಡಿದ್ದಾರೆ. ಆದರೆ ಕೆಲವರು ಈ ಕುರಿತು ಗೊಂದಲದ ಹೇಳಿಕೆ ಕೊಡುತ್ತಿದ್ದಾರೆ. ಆದ್ದರಿಂದ ಕಾರ್ಯಾಚರಣೆ ಕುರಿತು ಡೋಜರ್ಸ್ (ವಿಡಿಯೋ
ಸಾಕ್ಷಿ) ಬಿಡುಗಡೆ ಮಾಡುವ ಮೂಲಕ ಇದಕ್ಕೆ ತೆರೆ ಎಳೆಯಬೇಕೆಂದು ಗೃಹ ಸಚಿವ
ಎಂ.ಬಿ. ಪಾಟೀಲ್ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಗ್ರರ ಮೇಲೆ ನಡೆಸಿದ ಸರ್ಜಿಕಲ… ಸ್ಟ್ರೆ çಕ್ ಬಗ್ಗೆ ನಾವು ಯಾರಿಗೂ ಸಾಕ್ಷಿ ಕೇಳಿಲ್ಲ. ಸೇನೆ ನಡೆಸಿದ ಕಾರ್ಯಾಚರಣೆ ಬಗ್ಗೆ ಹೆಮ್ಮೆ ಇದೆ. ರಾಘವೇಂದ್ರ ಹಿಟ್ನಾಳ, ಪ್ರಿಯಾಂಕ್ ಖರ್ಗೆ ತಮಗೆ ತಿಳಿದ ಬಗ್ಗೆ ಹೇಳಿದ್ದಾರೆ. ಕಾರ್ಯಾಚರಣೆ ನಡೆದ ಬಳಿಕ ಸಹಜವಾಗಿ ಡೋಜರ್ಸ್ ಬಿಡುಗಡೆ ಮಾಡಲಾಗುತ್ತದೆ. ಯಾವುದೇ ಗೌಪ್ಯತೆ ಇಲ್ಲದಿದ್ದರೆ ಇದನ್ನು ಬಿಡುಗಡೆ ಮಾಡಬಹುದು. ಅದು ಸೇನೆಗೆ ಬಿಟ್ಟ ವಿಷಯ. ಆದರೆ ನಾವು ಅದಕ್ಕೆ ಒತ್ತಾಯ ಮಾಡುವುದಿಲ್ಲ ಎಂದರು.
ಸರ್ಜಿಕಲ್ ಸ್ಟ್ರೆçಕ್ ಅನ್ನು ರಾಜಕೀಯಕ್ಕೆ, ಚುನಾವಣೆಗೆ ಬಳಸಿಕೊಳ್ಳಬಾರದು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಈ ಕಾರ್ಯಾಚರಣೆ ನಮ್ಮ ಪಕ್ಷಕ್ಕೆ
ಅನುಕೂಲವಾಗುತ್ತದೆ. ಲೋಕಸಭೆಯಲ್ಲಿ 22 ಸ್ಥಾನ ಲಭಿಸುತ್ತವೆ ಎಂದು ಹೇಳಿದ
ಪೂರ್ಣ ವಿಡಿಯೋ ನನ್ನ ಬಳಿ ಇದೆ. ಈಗ ಅವರು ಹಾಗೆ ಹೇಳಿಲ್ಲವೆಂದು ರುಚುತ್ತಿದ್ದಾರೆ. ನಮ್ಮ ಸೈನಿಕರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು, ಈ
ಕುರಿತು ಲಾಭದ ಲೆಕ್ಕಾಚಾರ ಮಾಡುತ್ತಿರುವುದು ನಾಚಿಗೇಡಿನ ಸಂಗತಿ ಎಂದರು.
ಮಾಹಿತಿ ಬಹಿರಂಗಪಡಿಸಿ
ವಿಜಯಪುರ: “ಪಾಕಿಸ್ತಾನಕ್ಕೆ ವಾಯುಮಾರ್ಗವಾಗಿ ಸರ್ಜಿಕಲ್ ದಾಳಿ ನಡೆಸಿರುವ ಭಾರತೀಯ ಸೈನಿಕರ ಕಾರ್ಯ ಮೆಚ್ಚುವಂಥದ್ದು. ಅವರ ಸಾಹಸದ ಕುರಿತು ನಮಗೆ ಗೌರವವಿದೆ. ಆದರೆ ಸೂಕ್ಷ್ಮ ವಿಷಯಗಳನ್ನು ಹೊರತುಪಡಿ ಇತರೆ ಸಂಗತಿಗಳನ್ನು ಕೇಂದ್ರ ಸರ್ಕಾರ ದೇಶದ ಜನತೆಯ ಮುಂದೆ ಬಹಿರಂಗ ಪಡಿಸಬೇಕು ‘ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಆಗ್ರಹಿಸಿದರು. ಸುದ್ದಿಗಾರರ ಜತೆ ಮಾತನಾಡಿ, ನಮ್ಮ ಸೈನಿಕರ ಬಗ್ಗೆ ನಮಗೆ ಹೆಮ್ಮೆ, ಗೌರವವಿದೆ.ಆದರೆ ಉಗ್ರರ ದಾಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಕಾರಣ ಇದು ಸೂಕ್ಷ್ಮ ವಿಷಯ. ರಾಷ್ಟ್ರೀಯ ಮಾಧ್ಯಮಗಳಲ್ಲಿ ದಾಳಿ ಕುರಿತು ಹಲವು ಪ್ರಶ್ನೆಗಳು ಎದ್ದಿವೆ ಎಂದು ಕೊಪ್ಪಳ ಶಾಸಕ ಬಸವರಾಜ ಹಿಟ್ನಾಳ ಪ್ರಶ್ನಿಸಿದ್ದಾರೆ. ಇದರಲ್ಲಿ ಅಪಾರ್ಥವಿಲ್ಲ. ಸೂಕ್ಷ್ಮ ವಿಷಯಗಳ ಹೊರತಾಗಿ ಇತರೆ ವಿಷಯಗಳನ್ನು ಬಹಿರಂಗ ಪಡಿಸಬೇಕು ಎಂಬುದರಲ್ಲಿ ತಪ್ಪೇನೂ ಇಲ್ಲ ಎಂದರು.
ಅಜರ್ ಮಸೂದ್ಗಿಂತ ಕೆಟ್ಟವರು
ಧಾರವಾಡ: ಪಾಕ್ ಆಕ್ರಮಿತ ಪ್ರದೇಶದಲ್ಲಿ ಉಗ್ರರ ವಿರುದ್ಧ ಭಾರತೀಯ ವಾಯುಸೇನೆ ಮಾಡಿರುವ ಏರ್ಸ್ಟ್ರೆ çಕ್ ಬಗ್ಗೆ ಸಾಕ್ಷಿ ಕೇಳುವವರು ಉಗ್ರ ಅಜರ್ ಮಸೂದ್ಗಿಂತಲೂ ಕೆಟ್ಟವರು ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಾಳಿ ಬಗ್ಗೆ ಸ್ವಯಂ ಉಗ್ರರೇ ಒಪ್ಪಿಕೊಂಡಿದ್ದಾರೆ. ಆದರೆ ಕೆಲವರಿಗೆ ಇನ್ನೂ ನಂಬಿಕೆ ಬಂದಿಲ್ಲ. ಅದಕ್ಕಾಗಿ ಸಾಕ್ಷಿ ಕೇಳುತ್ತಿದ್ದಾರೆ. ಇಂತವರು ಭಾರತದ ಸೈನ್ಯ, ಚುನಾವಣಾಆಯೋಗ, ಸು ಪ್ರೀಂ ಕೋರ್ಟ್ ನಂಬುವುದಿಲ್ಲ. ಆದರೆ ಸಂವಿಧಾನದ ಸಂಸ್ಥೆಗಳ ಬಗ್ಗೆ ಮಾತನಾಡುತ್ತಾರೆ ಎಂದರು.