ಡೈರಿ ವಿಚಾರದಲ್ಲಿ ಕೋಲಾಹಲ: ಸದನ ಸೋಮವಾರಕ್ಕೆ;ಸಿಎಂ ಕಿಡಿ
Team Udayavani, Mar 17, 2017, 11:20 AM IST
ವಿಧಾನಮಂಡಲ:ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೈಕಮಾಂಡ್ಗೆ ಕಪ್ಪ ಸಲ್ಲಿಸಿದೆ ಎನ್ನಲಾದ ಡೈರಿ ವಿವಾದ ಶುಕ್ರವಾರವೂ ಉಭಯ ಸದನಗಳಲ್ಲೂ ಪ್ರಸ್ತಾಪಗೊಂಡು ಕೋಲಾಹಲಕ್ಕೆ ಕಾರಣವಾಗಿ ಬಜೆಟ್ ಕುರಿತಾಗಿನ ಯಾವುದೇ ಚರ್ಚೆಗಳಿಲ್ಲದೆ ಇಂದಿನ ದಿನವೂ ವ್ಯರ್ಥವಾಗಿದೆ.
ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ವಿಧಾನ ಸಭೆಯಲ್ಲಿ ಚರ್ಚೆಗೆ ಪಟ್ಟು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಹಿನ್ನಲೆ ತೀವ್ರ ಗದ್ದಲ ಉಂಟಾಯಿತು. ಕೋಲಾಹಲದ ಹಿನ್ನಲೆಯಲ್ಲಿ ಸ್ಪೀಕರ್ ಕೋಳಿವಾಡ ಅವರು ಕಲಾಪವನ್ನು ಅರ್ಧಗಂಟೆಗಳ ಕಾಲ ಮುಂದೂಡಿದರು.
ಸದನ ಪುನರಾರಂಭಗೊಂಡಾಗ ಮತ್ತೆ ತೀವ್ರ ಗದ್ದಲ ಏರ್ಪಟ್ಟ ಕಾರಣ ವಿಧಾನಸಭೆಯ ಕಲಾಪವನ್ನು ಸ್ವೀಕರ್ ಕೋಳಿವಾಡ ಅವರು ಸೋಮವಾರಕ್ಕೆ ಮುಂದೂಡಿದರು.
ಗುರುವಾರ ಇಡೀ ದಿನದ ಕಲಾಪ ಡೈರಿ ಚರ್ಚೆಗೆ ಬಲಿಯಾಗಿತ್ತು. ಇನ್ನೊಂದು ಪ್ರತಿಪಕ್ಷ ಜೆಡಿಎಸ್ ಕಲಾಪವನ್ನು ಹಾಳು ಮಾಡದೆ ಬಜೆಟ್ ಕುರಿತಾಗಿ ಚರ್ಚೆ ನಡೆಸಬೇಕು ಎಂದಿದೆ.
ರಾಜಕೀಯ ಸಂಚು
‘ಬಿಜೆಪಿ ಸದನಲ್ಲಿ ಇಲ್ಲದ ಫೇಕ್ ಡೈರಿ ವಿಚಾರದಲ್ಲಿ ಚರ್ಚೆಗೆ ಮುಂದಾಗಿ ಸಮಯ ವ್ಯರ್ಥ ಮಾಡುತ್ತಿದೆ. ಇದೊಂದು ರಾಜಕೀಯ ಸಂಚು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದರು.
‘ನಮ್ಮ ಬಜೆಟ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ಸಹಿಸಿಕೊಳ್ಳಾಲಾಗದೆ ಡೈರಿ ವಿಷಯ ಎತ್ತಿಕೊಂಡು ಪ್ರತಿಭಟನೆ ನಡೆಸುತ್ತಿದೆ. ಅವರಿಗೆ ಜನರ ಸಮಸ್ಯೆಗಳ ಬಗ್ಗೆ ಅರಿವಿಲ್ಲ’ ಎಂದು ತೀವ್ರ ವಾಗ್ಧಾಳಿ ನಡೆಸಿದರು.