ಮಾದರಿ ರಾಜ್ಯದ ಗುರಿ : ಯಡಿಯೂರಪ್ಪ ಸರಕಾರಕ್ಕೆ ಒಂದು ವರ್ಷ; ವರದಿ ಬಿಡುಗಡೆ
Team Udayavani, Jul 28, 2020, 6:31 AM IST
ಸರಕಾರ ವರ್ಷ ಪೂರೈಸಿದ ಕಾರ್ಯಕ್ರಮವನ್ನು ಸಿಎಂ ಯಡಿಯೂರಪ್ಪ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರು: ಬರ ಕಾಣಿಸಿಕೊಂಡಿದ್ದಾಗ ಅಧಿಕಾರ ವಹಿಸಿಕೊಂಡ ನನಗೆ ಆ ಬಳಿಕ ನೆರೆಯ ಅಗ್ನಿಪರೀಕ್ಷೆ ಎದುರಾಯಿತು.
ಈಗ ಕೋವಿಡ್ 19 ಪಿಡುಗಿನಿಂದ ಹಿನ್ನಡೆಯಾದರೂ ಒಂದಷ್ಟು ಅಭಿವೃದ್ಧಿಯಾಗಿದೆ.
ರಾಜ್ಯದ ಜನರ ಋಣ ತೀರಿಸಬೇಕಿದ್ದು, ಮೂರು ವರ್ಷಗಳಲ್ಲಿ ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ರಾಜ್ಯ ಸರಕಾರ ಒಂದು ವರ್ಷದ ಆಡಳಿತ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸೋಮವಾರ ‘ಸಮಸ್ಯೆ- ಸವಾಲುಗಳ ಒಂದು ವರ್ಷ: ಪರಿಹಾರದ ಸ್ಪರ್ಶ’ ಶೀರ್ಷಿಕೆಯಡಿ ನಡೆದ ಸರಕಾರದ ಕಾರ್ಯನಿರ್ವಹಣ ವರದಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾನು ಅಧಿಕಾರ ವಹಿಸಿಕೊಂಡು ರವಿವಾರಕ್ಕೆ ವರ್ಷ ಪೂರ್ಣಗೊಂಡಿದೆ. ಇನ್ನುಳಿದ ಅವಧಿಯಲ್ಲಿ ಎಲ್ಲರ ಸಹಕಾರದಿಂದ ಸುಭದ್ರ ಸರಕಾರ ಮುನ್ನಡೆಸುವುದರ ಜತೆಗೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ನನ್ನ ಗುರಿ. ಅದನ್ನು ತಲುಪಲು ನನ್ನ ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಎಲ್ಲರ ಸಹಕಾರದಿಂದ ಅಭಿವೃದ್ಧಿ ಕೋವಿಡ್-19ರ ಸಂದರ್ಭದಲ್ಲೂ ಅಭಿವೃದ್ಧಿ ಆಗಿದೆ ಎಂದಾದರೆ ಅದಕ್ಕೆ ಪ್ರಧಾನಿ ಮೋದಿಯವರ ಆಶೀರ್ವಾದ, ಶಾಸಕರು, ಸಂಪುಟ ಸಹೋದ್ಯೋಗಿಗಳು, ಸಂಸದರು, ವಿಪಕ್ಷ ನಾಯಕರ ಸಹಕಾರ ಕಾರಣ ಎಂದರು.
ಕಣ್ಣೀರು ಬರುತ್ತದೆ
ಕೋವಿಡ್ ಕಾಡುವುದನ್ನು ನೆನಪಿಸಿಕೊಂಡರೆ ನನಗೆ ಕಣ್ಣೀರು ಬರುತ್ತದೆ. ಭಗವಂತನ ಇಚ್ಛೆ ಏನಿದೆಯೋ ಗೊತ್ತಿಲ್ಲ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈಗಾಗಲೇ ಶೇ.90ರಷ್ಟು ರೈತರು ಬಿತ್ತನೆ ಪೂರ್ಣಗೊಳಿಸುತ್ತಿದ್ದಾರೆ. ಈ ಬಾರಿಯೂ ಅತಿವೃಷ್ಟಿಯಾಗದೆ ಜನ ನೆಮ್ಮದಿಯಿಂದ ಬದುಕುವಂತಹ ಒಳ್ಳೆಯ ಕಾಲ ಬರಬೇಕು ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.
ರಾಜ್ಯದ ಜನತೆಯ ಬಹಳಷ್ಟು ಋಣ ತೀರಿಸಬೇಕಿದೆ. ಎಲ್ಲರ ಸಹಕಾರದಿಂದ ನಾಡಿನ ಜನ, ರೈತರು, ಕೃಷಿ ಕಾರ್ಮಿಕರು, ದೀನ ದಲಿತರು ಗೌರವದಿಂದ ಬದುಕಲು ಅಗತ್ಯವಾದ ಕಾರ್ಯಕ್ರಮಗಳನ್ನೆಲ್ಲ ರೂಪಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಇನ್ನು ಮೂರು ವರ್ಷದಲ್ಲಿ ಯಾವುದೇ ಬಡವನಿಗೂ ವಾಸಕ್ಕೆ ಮನೆ ಇಲ್ಲದಂತಾಗಬಾರದು ಎಂಬ ಗುರಿ ಇದೆ. ಅದಕ್ಕೆ ಪೂರಕವಾಗಿ ಎಲ್ಲ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರು ನಾನಾ ಯೋಜನೆ, ಪರಿಹಾರಗಳ ನೆರವು ಪಡೆದ ಫಲಾನುಭವಿಗಳೊಂದಿಗೆ ಆನ್ಲೈನ್ ಸಂವಾದ ನಡೆಸಿದರು.
ಕೈಪಿಡಿ ಬಿಡುಗಡೆ
ಸರಕಾರ ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಪ್ರಗತಿ ವಿವರ ನೀಡಲು ರೂಪಿಸಿರುವ “ಸವಾಲುಗಳ ಒಂದು ವರ್ಷ- ಪರಿಹಾರದ ಸ್ಪರ್ಶ’ ಕೈಪಿಡಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವರಾದ ಆರ್. ಅಶೋಕ್, ಎಸ್. ಸುರೇಶ್ ಕುಮಾರ್, ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಬಿಡುಗಡೆಗೊಳಿಸಿದರು. ಸಿಎಂ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್ ಸಂಪಾದಕತ್ವದ “ಪುಟಕ್ಕಿಟ್ಟ ಚಿನ್ನ’ ಕಿರುಹೊತ್ತಗೆ, ‘ಮಾರ್ಚ್ ಆಫ್ ಕರ್ನಾಟಕ’ ಕೈಪಿಡಿಯನ್ನೂ ಇದೇ ವೇಳೆ ಬಿಡುಗಡೆ ಮಾಡಲಾಯಿತು. ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ್ ಉಪಸ್ಥಿತರಿದ್ದರು.
ಸೋರಿಕೆ ತಡೆದು ಖಜಾನೆ ತುಂಬಿ
ರಾಜ್ಯದಲ್ಲಿ ಇನ್ನು ಲಾಕ್ಡೌನ್ ಬಗ್ಗೆ ಚರ್ಚಿಸುವುದಿಲ್ಲ. ಈಗಾಗಲೇ ಎಲ್ಲ ಡಿಸಿಗಳೊಂದಿಗೆ ಚರ್ಚಿಸಲಾಗಿದ್ದು, ಸೋಂಕು ನಿಯಂತ್ರಣಕ್ಕೆ ಶ್ರಮ ವಹಿಸುವಂತೆ ಸೂಚಿಸಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಇನ್ನು ಮುಂದೆ ಕೋವಿಡ್ 19 ಜತೆಗೆ ಬದುಕುವುದನ್ನು ಕಲಿಯಬೇಕಿದೆ. ಆದ್ದರಿಂದ ಕೋವಿಡ್ ಜತೆಗೆ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದು ನಮ್ಮ ಕರ್ತವ್ಯ ಎಂದರು.
ಸೋರಿಕೆ ತಡೆದು ಖಜಾನೆ ತುಂಬಿ ಅಭಿವೃದ್ಧಿ ಕಾರ್ಯದ ಕಡೆಗೆ ಗಮನ ಕೊಡಬೇಕು ಎಂಬುದು ಎಲ್ಲ ಶಾಸಕರು, ಸಂಸದರು, ಅಧಿಕಾರಿಗಳಲ್ಲಿ ನನ್ನ ಮನವಿ. ರಾಜ್ಯದಲ್ಲಿ ವಿಶಾಲ ಭೂಮಿ, ದಟ್ಟ ಅರಣ್ಯ, ದುಡಿಯಲು ಲಕ್ಷಾಂತರ ಕೈಗಳಿವೆ. ಇವನ್ನೆಲ್ಲ ಬಳಸಿ ನಾಡನ್ನು ಕಟ್ಟುವ ಮೂಲಕ ಕರ್ನಾಟಕವನ್ನು ಮಾದರಿ ರಾಜ್ಯ ಮಾಡುವ ಸಂಕಲ್ಪ ತೊಡೋಣ ಎಂದು ಬಿಎಸ್ವೈ ಕರೆ ನೀಡಿದರು.
ನಿರುದ್ಯೋಗ ನಿವಾರಣೆ ಉದ್ದೇಶ
ಕರ್ನಾಟಕ ಭೂಸುಧಾರಣೆ ಕಾಯ್ದೆಯ ಕಲಂ 79ಎ, ಬಿಗೆ ತಿದ್ದುಪಡಿ ತಂದ ಉದ್ದೇಶ ಸ್ಪಷ್ಟ. ಈ ವರೆಗೆ ಕೇವಲ ಶೇ.2ರಷ್ಟು ಕೃಷಿ ಭೂಮಿಯಷ್ಟೇ ಕೈಗಾರಿಕೆಗಳಿಗೆ ಬಳಕೆಯಾಗಿದೆ. ಮುಂದಿನ ದಿನಗಳಲ್ಲಿ ಕೈಗಾರಿಕೆಗಳಿಗೆ ತುಸು ಉತ್ತೇಜನ ನೀಡುವುದರಿಂದ ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತದೆ ಎಂಬ ಕಾರಣಕ್ಕೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅದರ ವಿನಾ ಬೇರೆ ಯಾವುದೇ ಕಾರಣವಿಲ್ಲ. ಹಾಗಾಗಿ ವಿಪಕ್ಷಗಳು ಅನಗತ್ಯವಾಗಿ ಟೀಕೆ ಮಾಡದೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಿಎಂ ಹೇಳಿದರು.
ದ್ವೇಷದ ರಾಜಕಾರಣ ಮಾಡಿಲ್ಲ
ನಾನು ಎಂದೂ ದ್ವೇಷದ ರಾಜಕಾರಣ ಮಾಡಲಿಲ್ಲ. ನನ್ನನ್ನು ಟೀಕಿಸುವವರ ಬಗ್ಗೆಯೂ ಗೌರವ ಹೊಂದಿದ್ದೇನೆ. ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎಂಬುದು ನನ್ನ ಉದ್ದೇಶ. ಒಂದು ವರ್ಷದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಅವಕಾಶ ನೀಡಿಲ್ಲ. ಭೇದ ಭಾವ ಇಲ್ಲದೆ, ಕೋಮು ಗಲಭೆಗೆ ಅವಕಾಶವಿಲ್ಲದಂತೆ ಮುನ್ನಡೆಯುತ್ತಿದ್ದೇವೆ ಎಂದು ಸಿಎಂ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್