ಸಿಡಿದ ‘ವಿಲೀನ ಬಾಂಬ್’: ಲಿಂಬಾವಳಿ ಹೇಳಿಕೆ; ತಳ್ಳಿ ಹಾಕಿದ ಬಿಎಸ್ವೈ, ಎಚ್ಡಿಕೆ
Team Udayavani, Dec 21, 2020, 6:28 AM IST
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಿಕಟವಾಗುತ್ತಿರುವುದರ ಬೆನ್ನಲ್ಲೇ ದಿಢೀರ್ ವಿಲೀನ ವಿಚಾರ ಚರ್ಚೆಗೆ ಬಂದಿರುವುದು ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ನಡೆಯಲಿದ್ದು, ಒಂದು ಪಕ್ಷ ಮತ್ತೂಂದರ ಜತೆಗೆ ವಿಲೀನವೂ ಆಗಬಹುದು ಎಂಬ ಮಾಹಿತಿ ಇದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ರವಿವಾರ ಸಿಡಿಸಿದ “ಬಾಂಬ್’ ಸಂಚಲನಕ್ಕೆ ಕಾರಣವಾಯಿತು.
ಇದರ ಬೆನ್ನಲ್ಲೇ ಖುದ್ದು ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು, ಬಿಜೆಪಿ-ಜೆಡಿ ಎಸ್ ವಿಲೀನವಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಮೈತ್ರಿ ಇಲ್ಲ ಎಂದು ಇಬ್ಬರೂ ಹೇಳಲಿಲ್ಲ. ಕುಮಾರಸ್ವಾಮಿ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಮುಂದಿನ ದಿನಗಳಲ್ಲಿ ಬಿಜೆಪಿ ಜತೆಗೆ ವಿಷಯಾಧಾರಿತ ಬೆಂಬಲ ಮತ್ತು ವಿಶ್ವಾಸ ಪೂರ್ವಕ ಸಂಬಂಧ ಹೊಂದಲಾಗುವುದು ಎಂದು ಹೇಳಿ ಅಚ್ಚರಿ ಮೂಡಿಸಿದರು.
ಈ ಬೆಳವಣಿಗೆಗಳ ಬಗ್ಗೆ ಜೆಡಿಎಸ್ ಶಾಸಕರ ವಲಯದಲ್ಲೂ ಪರ -ವಿರೋಧ ವ್ಯಕ್ತವಾಗಿದೆ. ಹಿರಿಯ ನಾಯಕ ಬಸವರಾಜ ಹೊರಟ್ಟಿ ಮೈತ್ರಿ ಬಗ್ಗೆ ಸಹ ಮತ ವ್ಯಕ್ತಪಡಿಸಿದ್ದಾರೆ. ಆದರೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮೂಲಗಳ ಪ್ರಕಾರ, ಹದಿನೈದು ದಿನಗಳ ಹಿಂದೆ ಬಿಜೆಪಿಯ ದಿಲ್ಲಿ ನಾಯಕರೊಬ್ಬರು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಮುಂದೆ ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ವಿಲೀನ ಪ್ರಸ್ತಾವ ಮಂಡಿಸಿದ್ದಾರೆ. ಈ ಸಂಬಂಧ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪಕ್ಷದ ನಾಯಕರ ಜತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಕೆಲವು ಶಾಸಕರು ವಿಲೀನದ ಬಗ್ಗೆ ಆಕ್ಷೇಪ ಎತ್ತಿದ್ದಾರೆ ಎನ್ನಲಾಗುತ್ತಿದೆ.
ಕೆಲವರು ಪಕ್ಷದ ಭವಿಷ್ಯದ ದೃಷ್ಟಿಯಿಂದ ಬಿಹಾರ ಮಾದರಿಯಲ್ಲಿ ಮೈತ್ರಿ ಮಾಡಿಕೊಂಡು ಮುಂದುವರೆಯಬಹುದು ಎಂಬ ಸಲಹೆ ನೀಡಿದ್ದಾರೆ. ಜೆಡಿಎಸ್ ಎನ್ಡಿಎ ಭಾಗವಾಗದರೆ ಅಡ್ಡಿಯಿಲ್ಲ ಎಂದಿದ್ದಾರೆ ಎನ್ನಲಾಗಿದೆ.
ನಾಯಕರ ನಿರಾಕರಣೆ
ವಿಲೀನದ ಚರ್ಚೆ ಆರಂಭವಾಗುತ್ತಿದ್ದಂತೆ ತುರ್ತು ಪತ್ರಿಕಾ ಹೇಳಿಕೆ ನೀಡಿದ ಸಿಎಂ ಯಡಿಯೂರಪ್ಪ, ಪರಿಷತ್ ಸಭಾಪತಿ ವಿಚಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ಬೆಂಬಲ ನೀಡಿದ್ದಾರೆ. ಆದರೆ ವಿಲೀನ ಇಲ್ಲ ಎಂದರು.
ಈ ಬೆನ್ನಿಗೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ವಿಷಯಾಧಾರಿತ ಬೆಂಬಲ ಮಾತ್ರ ಇದೆ, ವಿಲೀನದಂಥ ಕಪೋಲಕಲ್ಪಿತ ಸುದ್ದಿಗಳಿಗೆ ಪ್ರಾಮುಖ್ಯ ಇಲ್ಲ. ವಿಲೀನದಂಥ ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ಬಂದಿಲ್ಲ, ಬರುವುದೂ ಇಲ್ಲ ಎಂದು ಹೇಳಿದ್ದಾರೆ.
150 ಬಿಜೆಪಿ ಟಾರ್ಗೆಟ್
ಬಿಜೆಪಿ 2023ರಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದ್ದು, ಅದಕ್ಕೆ ಪೂರಕವಾಗಿ ಈಗಿನಿಂದಲೇ ಕಾರ್ಯತಂತ್ರಗಳನ್ನು ಹೆಣೆಯುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಸುಮಾರು 40 ಸ್ಥಾನಗಳನ್ನು ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ ಎಂಬ ಮಾತು ಕೇಳಿ ಬರುತ್ತಿವೆ.
ಈ ಕಾರಣಕ್ಕೆ ಜೆಡಿಎಸ್ ಪಕ್ಷವನ್ನು ವಿಲೀನ ಮಾಡಿಕೊಳ್ಳುವ ಆಲೋಚನೆ ಹೊಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆ ಮೂಲಕ ದಕ್ಷಿಣ ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಒಕ್ಕಲಿಗ ಸಮುದಾಯವನ್ನು ಸೆಳೆಯುವ ಕಾರ್ಯತಂತ್ರ ರೂಪಿಸಿದೆ ಎನ್ನಲಾಗುತ್ತಿದೆ.
ಜೆಡಿಎಸ್ ಶಾಸಕರಿಗೆ ಭವಿಷ್ಯದ ಚಿಂತೆ
ಕಾಂಗ್ರೆಸ್ ಜತೆ ಕೇವಲ 14 ತಿಂಗಳು ಸರಕಾರ ನಡೆಸಿದ್ದರಿಂದ ಜೆಡಿಎಸ್ ಶಾಸಕರಿಗೆ ತಮ್ಮ ಕ್ಷೇತ್ರಗಳಿಗೆ ಸರಿಯಾಗಿ ಅನುದಾನ ಪಡೆದು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿಲ್ಲ ಎಂಬ ಭಾವನೆಯಿದೆ. ಸದ್ಯ ಬಿಜೆಪಿ ಸರಕಾರದ ವಿರುದ್ಧ ಸಂಘರ್ಷ ನಡೆಸಿದರೆ ಅನುದಾನ ಸಿಗುವುದು ಕಷ್ಟ ಎಂಬ ಅಸಹಾಯಕತೆಯನ್ನು ಕೆಲವು ಜೆಡಿಎಸ್ ಶಾಸಕರು ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಉಪಚುನಾವಣೆಯ ಫಲಿತಾಂಶದ ಅನಂತರ ಜೆಡಿಎಸ್ನ ಕೆಲವು ಶಾಸಕರು ಪಕ್ಷದ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿ, ಬಿಜೆಪಿ ಕಡೆಗೆ ಮುಖ ಮಾಡುವ ಸೂಚನೆ ನೀಡಿದ್ದರು ಎನ್ನಲಾಗುತ್ತಿದೆ. ಈ ಸುಳಿವು ಪಡೆದ ಕುಮಾರಸ್ವಾಮಿ, ಇತ್ತೀಚೆಗೆ ತಿಂಗಳಲ್ಲಿ ಎರಡು ಬಾರಿ ನೇರವಾಗಿ ಸಿಎ, ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಿಸುವ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಬಿಜೆಪಿ ಮತ್ತಷ್ಟು ಗಟ್ಟಿಯಾಗಲಿದೆ. ಒಂದು ಪಕ್ಷ ಮತ್ತೂಂದರ ಜತೆ ವಿಲೀನ ಆಗುತ್ತದೆ ಎಂಬ ಸುದ್ದಿಯ ಬಗ್ಗೆ ನಾನು ಕೇಳಿದ್ದೇನೆ.
ಅರವಿಂದ ಲಿಂಬಾವಳಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ
ಬಿಜೆಪಿ ಜತೆ ವಿಲೀನ ನಮ್ಮ ಪಕ್ಷದಲ್ಲಿ ಆಂತರಿಕವಾಗಿ ಚರ್ಚೆಗೆ ಬಂದಿತ್ತು. ಆದರೆ ಈ ಬಗ್ಗೆ ನಾವು ಮಾತನಾಡಿಲ್ಲ. ಬಿಜೆಪಿಯೊಂದಿಗೆ ವಿಲೀನ ಇಲ್ಲ. ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸಹಮತ ಇದೆ.
ಬಸವರಾಜ್ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ
ರಾಜ್ಯದಲ್ಲಿ ಬಿಜೆಪಿ ಮತ್ತಷ್ಟು ಗಟ್ಟಿ ಯಾಗ ಲಿದೆ. ಒಂದು ಪಕ್ಷ ಮತ್ತೂಂದರ ಜತೆ ವಿಲೀನ ಆಗು ತ್ತದೆ ಎಂಬ ಸುದ್ದಿಯ ಬಗ್ಗೆ ನಾನು ಕೇಳಿದ್ದೇನೆ.
-ಅರವಿಂದ ಲಿಂಬಾವಳಿ, ರಾಜ್ಯ ಬಿಜೆಪಿ, ಪ್ರ. ಕಾರ್ಯದರ್ಶಿ
ಮೈತ್ರಿ- ವಿಲೀನಕ್ಕೆ ರೆಕ್ಕೆಪುಕ್ಕ
* ಎಚ್ಡಿಕೆಯವರು ಸಿಎಂ ಬಿಎಸ್ವೈ ಅವರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿರುವುದು.
* ಪ್ರಧಾನಿ ಮೋದಿ ಕುಮಾರಸ್ವಾಮಿ ಜನ್ಮದಿನಕ್ಕೆ ಶುಭಾಶಯ ಕೋರಿರುವುದು.
* ವಿಧಾನ ಪರಿಷತ್ತಿನಲ್ಲಿ ಭೂ ಸುಧಾರಣೆ ಕಾಯ್ದೆ ಬಗ್ಗೆ ಬಿಜೆಪಿಗೆ ಜೆಡಿಎಸ್ ಬಹಿರಂಗ ಬೆಂಬಲ.
*ಪರಿಷತ್ ಸಭಾಪತಿ ವಿರುದ್ಧ ಬಿಜೆಪಿಯ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಅಧಿಕೃತ ಬೆಂಬಲ.
* ಕೋಡಿಹಳ್ಳಿ ಚಂದ್ರಶೇಖರ್ ಅವರು ಕುಮಾರಸ್ವಾಮಿ ಅವನ್ನು ಟೀಕಿಸಿದಾಗ ಕುಮಾರಸ್ವಾಮಿ ಪರ ನಿಂತ ಬಿಎಸ್ವೈ.
*ಬಿಜೆಪಿ ಜತೆ ಹೋಗಿದ್ದರೆ ನಾನು ಸಿಎಂ ಆಗಿರುತ್ತಿದ್ದೆ ಎಂಬ ಕುಮಾರಸ್ವಾಮಿ ಅವರ ಇತ್ತೀಚಿಗಿನ ಹೇಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ
Revealed; ನೇಹಾ ಹಿರೇಮಠ ಹಂತಕ ಫಯಾಜ್ನ ಮತ್ತೊಂದು ಕರಾಳ ಮುಖ ಅನಾವರಣ
Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್ ಜಿದ್ದಾಜಿದ್ದಿ
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು
Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ
Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ