ಮಹಿಳೆಗೆ ವಂಚನೆ: ಕಾರ್ಯಕಾರಿಣಿಯಲ್ಲೇ ಬಿಜೆಪಿ ನಾಯಕನ ಸೆರೆ!
Team Udayavani, Jan 21, 2017, 3:44 PM IST
ಕಲಬುರಗಿ : ಇಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಒಂದೆಡೆ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಅವರ ನಡುವಿನ ಮುನಿಸು ಪಕ್ಷಕ್ಕೆ ಇರಿಸುಮುರಿಸು ತಂದಿಟ್ಟಿದ್ದು, ಇನ್ನೊಂದೆಡೆ ನಾಯಕನೊಬ್ಬನ ಬಂಧನ ಪಕ್ಷಕ್ಕೆ ಇನ್ನಷ್ಟು ಮುಜುಗರ ತಂದಿಟ್ಟಿದೆ.
ಮಹಿಳೆಯೊಬ್ಬಳಿಗೆ ವಂಚಿಸಿದ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾ ಸದಸ್ಯರಾಗಿರುವ ವೆಂಕಟೇಶ್ ಮೌರ್ಯ ಅವರನ್ನು ಬೆಂಗಳೂರಿನ ಉಪ್ಪಾರಪೇಟೆ ಠಾಣೆಯ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
2011 ರಲ್ಲಿ ಮೌರ್ಯ ವಿರುದ್ಧ ಮಹಿಳೆ ವಂಚನೆ ಪ್ರಕರಣ ದಾಖಲಿಸಿದ್ದರು. ಆಬಳಿಕ ಪೊಲೀಸರು ಇಬ್ಬರ ನಡುವೆ ಸಂಧಾನಕ್ಕೆ ಯತ್ನಿಸಿದ್ದರಾದರೂ ಮಾತುಕತೆ ವಿಫಲವಾಗಿತ್ತು.
ತಲೆ ಮರೆಸಿಕೊಂಡಿದ್ದ ಮೌರ್ಯ ಅವರು ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾಗಿಯಾಗುವ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.