ಮಿಷನ್ 150 ಲೆಕ್ಕಾಚಾರ; ಮತಬೇಟೆಗೆ ಬಿಜೆಪಿ ರಣತಂತ್ರ ಆರಂಭ
Team Udayavani, Apr 26, 2022, 9:35 AM IST
ಬೆಂಗಳೂರು: ಚುನಾವಣಾ ವರ್ಷ ಸಮೀಪಿಸುತ್ತಿದ್ದಂತೆ ಸಂಘಟನಾ ಚಟುವಟಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಬಿಜೆಪಿ ಈ ಬಾರಿಯಾದರೂ ಮಿಷನ್ 150 ಗುರಿ ತಲುಪಲು ಸಾಧ್ಯವೇ ಎಂಬ ಲೆಕ್ಕಾಚಾರ ಈಗ ಪಕ್ಷದ ಆಂತರಿಕ ವಲಯದಲ್ಲಿ ಆರಂಭವಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರು ಭೇಟಿಯ ನಂತರ ಬಿಜೆಪಿಯ ಮಿಷನ್ 150 ಚರ್ಚೆ ತೀವ್ರಗೊಂಡಿದೆ. ಅಮಿತ್ ಶಾ ಸೂಚನೆ ಆಧರಿಸಿ ಬಿಜೆಪಿ ಸಂಘಟನೆಯನ್ನು ಗಟ್ಟಿ ಮಾಡಿಕೊಳ್ಳಲು ಯೋಚಿಸಿದೆ. ಈ ಹಿನ್ನೆಲೆಯಲ್ಲಿ ನಿಷ್ಕ್ರೀಯಗೊಂಡ ಪದಾಧಿಕಾರಿಗಳಿಗೆ ಗೇಟ್ ಪಾಸ್ ಕೊಟ್ಟು ನಾನಾ ಮೋರ್ಚಾಗಳಿಗೆ ಹೊಸಬರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ.
ಕ್ರೋಢೀಕರಣ ಸಫಲವಾಗದು: ತಮ್ಮ ಭೇಟಿ ಸಂದರ್ಭದಲ್ಲಿ ಚುನಾವಣೆ ಗೆಲ್ಲುವುದಕ್ಕೆ ಹಿಂದುತ್ವದ ಮತ ಕ್ರೋಢೀಕರಣವೊಂದೆ ಸಾಲುವುದಿಲ್ಲ ಎಂದು ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದಾರೆ. ಇದಕ್ಕೆ ಉತ್ತರ ಪ್ರದೇಶದ ಉದಾಹರಣೆ ನೀಡಿರುವ ಅವರು ಅಭಿವೃದ್ಧಿ ಹಾಗೂ ಸುಶಾಸನದ ಉದಾಹರಣೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಚುನಾವಣೆಯಲ್ಲಿ ಸೋತಿರುವ ಕ್ಷೇತ್ರಗಳನ್ನು ಕಮಲಮಯವನ್ನಾಗಿ ಮಾಡಲು ಬಿಜೆಪಿ ತಂತ್ರಗಾರಿಕೆ ಆರಂಭಿಸಿದೆ.
150 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂದರೆ ಈಗಿನಿಂದಲೇ ತಯಾರಿ ನಡೆಸಬೇಕು. ಯಾವುದೇ ಕಾರಣಕ್ಕೂ ಮೈಮರೆಯಬಾರದು. ಸಂಘಟನೆಗೆ ಒತ್ತು ನೀಡಬೇಕೆಂಬ ಸ್ಪಷ್ಟ ಸಂದೇಶವನ್ನು ಪದಾಧಿಕಾರಿಗಳಿಗೆ ನೀಡಲಾಗಿದೆ.
ಇದನ್ನೂ ಓದಿ:2024ರ ಲೋಕಸಭೆ ಚುನಾವಣೆಗೆ ಟಾರ್ಗೆಟ್; ಕಾರ್ಯತಂತ್ರ ಶುರು
ಚುನಾವಣೆ ತಯಾರಿ ಯಾವ ರೀತಿ ಇರಬೇಕು, ಯಾವ ರೀತಿ ತಂತ್ರಗಾರಿಕೆ ಮಾಡಿದರೆ ಚುನಾವಣೆಯಲ್ಲಿ ಗೆಲ್ಲಬಹುದು, ಸದ್ಯ ಸಂಘಟನೆ ಯಾವ ರೀತಿಯಿದೆ, ಯಾವ್ಯಾವ ಘಟಕಗಳು ಎಷ್ಟುಸಕ್ರಿಯವಾಗಿವೆ, ಯಾವ್ಯಾವ ಪದಾಧಿಕಾರಿಗಳು ನಿಷ್ಕ್ರೀಯರಾಗಿದ್ದಾರೆ ಎಂಬ ಬಗ್ಗೆ ಮಾಹಿತಿಯನ್ನು ಹೊಸಪೇಟೆಯಲ್ಲಿ ನಡೆದ ಕಾರ್ಯಕಾರಿಣಿ ಜತೆಗೆ ಶಿವಮೊಗ್ಗ ಹಾಗೂ ಹುಬ್ಬಳ್ಳಿ ವಿಭಾಗೀಯ ಸಮಾವೇಶದಲ್ಲಿ ಪಡೆಯಲಾಗಿದೆ.
ಈಗ ಬಿಜೆಪಿ ಶಾಸಕರಿರುವ ಕ್ಷೇತ್ರಗಳ್ಯಾವವು, ಅಲ್ಲಿ ಸದ್ಯ ಯಾವ ರೀತಿ ಪಕ್ಷದ ಸಂಘಟನೆಯಿದೆ, ಇನ್ನಷ್ಟು ಗಟ್ಟಿ ಮಾಡಿಕೊಳ್ಳಬೇಕೆಂದರೆ ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲಾಗಿದ್ದು, ಯಾವ್ಯಾವ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿಲ್ಲ. ಅಲ್ಲಿ ಬಾರದಿರುವುದಕ್ಕೆ ಕಾರಣವೇನು? ಅಲ್ಲಿರುವ ಆಕಾಂಕ್ಷಿಗಳ್ಯಾರು? ಅವರ ತಯಾರಿ ಯಾವ ರೀತಿ ನಡೆದಿದೆ. ಈ ಸಲ ಆ ಕ್ಷೇತ್ರದಲ್ಲಿ ಗೆಲ್ಲಬೇಕೆಂದರೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು. ಪೇಜ್ ಪ್ರಮುಖರ ನೇಮಕಾತಿ, ಬೂತ್ ಮಟ್ಟದ ಕಮಿಟಿಗಳ ಕಾರ್ಯವೈಖರಿ ಬಗ್ಗೆ ಚರ್ಚೆ ನಡೆಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಯಾವ ರೀತಿ ಜನರಿಗೆ ಮನದಟ್ಟು ಮಾಡಬೇಕು, ಸಂಘಟನೆ ಯಾವ ರೀತಿ ಮಾಡಿದರೆ ಉತ್ತಮ ಎಂಬ ಬಗ್ಗೆ ಸಲಹೆ ನೀಡಲಾಗಿದೆ.