ನಟ ಜಗ್ಗೇಶ್ ಗೆ ಬಿಜೆಪಿ ರಾಜ್ಯಸಭೆ ಟಿಕೆಟ್ : ಸಚಿವೆ ನಿರ್ಮಲಾಗೆ ಮತ್ತೆ ಪ್ರಾಶಸ್ತ್ಯ
ಮೂರನೇ ಅಭ್ಯರ್ಥಿ ಕಣಕ್ಕಿಸುತ್ತದೆಯೋ ಕೇಸರಿ ಪಾಳಯ?
Team Udayavani, May 29, 2022, 7:19 PM IST
ಬೆಂಗಳೂರು : ಬಿಜೆಪಿ ದೇಶದ ವಿವಿಧ ರಾಜ್ಯಗಳಿಗೆ 16 ಮಂದಿ ರಾಜ್ಯಸಭಾ ಅಭ್ಯರ್ಥಿಗಳನ್ನು ಘೋಷಿಸಿದ್ದು, ಕರ್ನಾಟಕದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮತ್ತೆ ಪ್ರಾಶಸ್ತ್ಯ ನೀಡಲಾಗಿದ್ದು, ಅಚ್ಚರಿ ಎಂಬಂತೆ ಖ್ಯಾತ ನಟ ಜಗ್ಗೇಶ್ ಅವರಿಗೆ ಟಿಕೆಟ್ ನೀಡಲಾಗಿದೆ.
ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಘೋಷಿಸಿಲ್ಲ. ಭಾನುವಾರ ಇಬ್ಬರೇ ಅಧಿಕೃತ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.
ಇದನ್ನೂ ಓದಿ : ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೀದರ್ ನ ಏಳು ಜನರ ದುರ್ಮರಣ
ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮತ ಒಡೆಯುವ ತಂತ್ರಗಾರಿಕೆಗೆ ಮುಂದಾಗಿದೆ ಎಂದು ಹೇಳಲಾಗಿದೆ.
ರಾಜ್ಯಸಭೆಗೆ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ರಾಜ್ಯ ವಿಧಾನ ಸಭೆಯಲ್ಲಿ ಪಕ್ಷಗಳ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ಇಬ್ಬರು ಹಾಗೂ ಕಾಂಗ್ರೆಸ್ನಿಂದ ಒಬ್ಬರನ್ನು ಆಯ್ಕೆ ಮಾಡಲು ಅವಕಾಶವಿದೆ. ನಾಲ್ಕನೇ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮೂರು ಪಕ್ಷಗಳಲ್ಲಿ ಸಂಖ್ಯಾಬಲದ ಕೊರತೆ ಇದೆ.
ಮತ್ತೊಂದೆಡೆ ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿತರಾಗಿರುವ ಕುಪೇಂದ್ರ ರೆಡ್ಡಿ ಈಗಾಗಲೇ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ. ಒಂದೊಮ್ಮೆ ಬಿಜೆಪಿ 3ನೇ ಅಭ್ಯರ್ಥಿ ಸ್ಪರ್ಧಿಸಿದರೆ ಕಣ ರಂಗೇರುವ ಸಾಧ್ಯತೆಗಳಿವೆ.