ನಿಮ್ಮ ಕೋವಿಡ್ ಪರೀಕ್ಷೆಯ ವರದಿ ಬಹಿರಂಗಗೊಳಿಸಿ;ಡಿ.ಕೆ.ಶಿವಕುಮಾರ್ ಗೆ ಬಿಜೆಪಿ ಸವಾಲು
ನಿಮ್ಮ ಸದಾರಮೆ ನಾಟಕ ನಿಲ್ಲಿಸಿ. ಕಂಡವರ ಜಮೀನಿಗೆ ಬೇಲಿ ಸುತ್ತಿ ನೀವು ಕುಬೇರರಾಗಿರಬಹುದು.
Team Udayavani, Jan 14, 2022, 12:51 PM IST
ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಸದಾರಮೆ ನಾಟಕ ನಿಲ್ಲಿಸಿ, ಕನಕಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಕೋವಿಡ್ ಪರೀಕ್ಷೆಯ ವರದಿ ಬಹಿರಂಗಗೊಳಿಸುವಂತೆ ಶಿವಕುಮಾರ್ ಗೆ ಸವಾಲು ಹಾಕಿದೆ.
ಬೃಹನ್ನಾಟಕ ಸೃಷ್ಟಿಯೇ ಡಿ.ಕೆ.ಶಿವಕುಮಾರ್ ಅವರ ಉದ್ದೇಶವಾಗಿಬಿಟ್ಟಿದೆ. ಜಿಲ್ಲಾಧಿಕಾರಿಯ ನೋಟಿಸ್ ಜಾರಿ ಮಾಡಲು ಬಂದ ಅಧಿಕಾರಿಗಳ ಜತೆ ಹೈಡ್ರಾಮಾ ಸೃಷ್ಟಿಸಿದ್ದೀರಿ. ಪಾದಯಾತ್ರೆ ಮಾಡಿ ಕೋವಿಡ್ ಹಂಚುವಾಗ ನೆನಪಾಗದ ಕೋವಿಡ್ ಮಾರ್ಗಸೂಚಿ ಈಗ ನೆನಪಾಗುತ್ತಿದೆಯೇ? ಮನೆ ಬಾಗಿಲಿಗೆ ಅಂಟಿಸಿದ ನೋಟಿಸ್ ನೀವೇ ಕಿತ್ತೆಸೆದಿರಾ? ಡಿಕೆಶಿ ಅವರೇ, ನಿಮ್ಮ ಆರೋಗ್ಯದ ಜತೆಗೆ ಸಾರ್ವಜನಿಕರ ಆರೋಗ್ಯವೂ ಅತಿ ಮುಖ್ಯ.
ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿರುವ ನೀವು ಕುಟುಂಬ ವರ್ಗದ ಜತೆ ಬೆರೆಯುವ ಮುನ್ನ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ. ಬನ್ನಿ ಕನಕಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಪರೀಕ್ಷೆ ಮಾಡಿಸುತ್ತೇವೆ, ತಯಾರಿದ್ದೀರಾ ? ಡಿಕೆಶಿ ಅವರೇ, ನಿಮ್ಮ ಸದಾರಮೆ ನಾಟಕ ನಿಲ್ಲಿಸಿ. ಕಂಡವರ ಜಮೀನಿಗೆ ಬೇಲಿ ಸುತ್ತಿ ನೀವು ಕುಬೇರರಾಗಿರಬಹುದು.
ಆದರೆ ಕಾನೂನನ್ನು ಕೆಪಿಸಿಸಿ ಅಧ್ಯಕ್ಷರೂ ಪಾಲನೆ ಮಾಡಲೇಬೇಕಲ್ಲವೇ? ಖಾಸಗಿ ಆಸ್ಪತ್ರೆ ವೈದ್ಯರಿಂದ ಪರೀಕ್ಷಿಸಿಕೊಳ್ಳುವ ಬದಲು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಿ, ವರದಿ ಬಹಿರಂಗಗೊಳಿಸಿ. ಪಾದಯಾತ್ರೆ ಆರಂಭಗೊಂಡಾಗಿನಿಂದಲೂ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸುತ್ತಿರುವ ಶಿವಕುಮಾರ್ ಅವರು ಈಗ ಜಿಲ್ಲಾಧಿಕಾರಿಯನ್ನು ಪ್ರಶ್ನಿಸುತ್ತಿದ್ದಾರೆ. ತಾನು ಕಳ್ಳ ಪರರ ನಂಬ ಎಂಬ ಗಾದೆ ಮಾತಿನ ರೀತಿ ನೀವು ವರ್ತಿಸುತ್ತಿದ್ದೀರಿ.ಮೊದಲು ನಿಮ್ಮ ಕೋವಿಡ್ ಪರೀಕ್ಷೆ ವರದಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಿ.