ಇದು ನನ್ನ ಗೆಲುವಲ್ಲ, ಕಾರ್ಯಕರ್ತರ ಗೆಲುವು: ಮಂಗಳ ಅಂಗಡಿ
Team Udayavani, May 2, 2021, 7:17 PM IST
ಬೆಳಗಾವಿ: ಬೆಳಗಾವಿ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇದು ನನ್ನ ಗೆಲುವಲ್ಲ ಕಾರ್ಯಕರ್ತರ ಗೆಲುವು. ದಿ. ಸುರೇಶ ಅಂಗಡಿ ಅವರ ಅಭಿವೃದ್ಧಿ ಕೆಲಸ ನೋಡಿ ಮತದಾರರು ನನ್ನನ್ನು ಆಯ್ಕೆ ಮಾಡಿದ್ದಾರೆ. ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನೂತನ ಸಂಸದೆ, ದಿ. ಸುರೇಶ ಅಂಗಡಿ ಅವರ ಪತ್ನಿ ಮಂಗಳ ಅಂಗಡಿ ಸಂತಸ ಹಂಚಿಕೊಂಡರು.
ರವಿವಾರ ಫಲಿತಾಂಶ ಹೊರ ಬಿಳುತ್ತಿದ್ದಂತೆ ಮಾಧ್ಯಮದವರೊಂದಿಗೆ ಸಂತಸ ಹಂಚಿಕೊಂಡ ಅವರು, ಪ್ರೀತಿ ವಿಶ್ವಾಸದಿಂದ ನನ್ನನ್ನು ಮತದಾರರು ಗೆಲ್ಲಿಸಿದ್ದಾರೆ. ಅಷ್ಟೇ ಪ್ರೀತಿ, ವಿಶ್ವಾಸದಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪತ್ನಿ ದಿ. ಸುರೇಶ ಅಂಗಡಿ ಅವರು ಜಿಲ್ಲೆಯ ಅಭಿವೃದ್ಧಿಗೆ ಬಹಳ ಕನಸು ಕಂಡಿದ್ದರು. ಅವರು ಅಂದುಕೊಂಡಿದ್ದ ಎಲ್ಲ ಕಾರ್ಯಗಳನ್ನು ಮಾಡಿ ಕೊಡುತ್ತೇನೆ. ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ ಎಂದರು.
ಇದನ್ನೂ ಓದಿ : 3 ತಿಂಗಳ ವೇತನ ಆಶಾಕಾರ್ಯಕರ್ತರಿಗೆ ನೀಡಿದ ಶಾಸಕ ಗಣೇಶ ಹುಕ್ಕೇರಿ
ದಿ. ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ಈ ಉಪಚುನಾವಣೆ ಬಂದಿದೆ. ಕಾರ್ಯಕರ್ತರು ಅಭಿಮಾನಿಗಳು ಈ ಉಪಚುನಾವಣೆಯಲ್ಲಿ ನಮ್ಮ ಕೈ ಹಿಡಿದಿದ್ದಾರೆ. ಕಡಿಮೆ ಅವಧಿಯಲ್ಲಿ ಪ್ರಚಾರ ನಡೆಸಿದ್ದೇವೆ. ಜನರು ಬಿಜೆಪಿ ಮೇಲೆ ವಿಶ್ವಾಸ ಇಟ್ಟುಕೊಂಡು ಮತ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರು, ಶಾಸಕರು, ಮಾಜಿ ಶಾಸಕರು, ಬಿಜೆಪಿ ಮುಖಂಡರು, ಕಾರ್ಯಕರ್ತರ ಶ್ರಮದಿಂದ ಗೆಲುವು ಸಾಧ್ಯವಾಗಿದೆ. ಎಲ್ಲರಿಗೂ ನಾಣು ಚಿರಋಣಿ ಆಗಿದ್ದೇನೆ ಎಂದರು.