ಕ್ಷೇತ್ರ ಫೈನಲ್:ಉಮಾಶ್ರೀ ವಿರುದ್ಧ ಸೆಣಸಲಿದ್ದಾರೆ ಬಿಎಸ್ವೈ!
Team Udayavani, Sep 26, 2017, 9:17 AM IST
ಬೆಂಗಳೂರು : ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರು ಕೊನೆಗೂ ತಾವು ಸ್ಪರ್ಧಿಸುವ ಉತ್ತರ ಕರ್ನಾಟಕ ಭಾಗದ ವಿಧಾನಸಭಾ ಕ್ಷೇತ್ರವನ್ನು ಅಂತಿಮಗೊಳಿಸಿದ್ದು , ಸಚಿವೆ ಉಮಾಶ್ರೀ ಅವರ ವಿರುದ್ಧ ಸ್ಪರ್ಧೆಗೆ ಮುಂದಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಿಂದ ಯಡಿಯೂರಪ್ಪ ಅವರು ಸ್ಪರ್ಧಿಸುವುದು ಅಂತಿಮವಾಗಿದ್ದು, ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಮಾಜಿ ಶಾಸಕ ಸಿದ್ದು ಸವದಿ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡುವ ಭರವಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
2008 ರಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಉಮಾಶ್ರೀ ಅವರನ್ನು ಸೋಲಿಸಿ ಬಿಜೆಪಿಯಿಂದ ಸಿದ್ದು ಸವದಿ ಆಯ್ಕೆಯಾಗಿದ್ದರು. 2013 ರಲ್ಲಿ ಉಮಾಶ್ರೀ ಅವರು ಸಿದ್ದು ಸವದಿ ಅವರ ವಿರುದ್ಧ ಜಯಗಳಿಸಿ ಶಾಸಕಿಯಾಗಿ ಆಯ್ಕೆಯಾಗಿ ಸಚಿವೆಯಾಗಿದ್ದರು.
ಕ್ಷೇತ್ರದಲ್ಲಿ ಲಿಂಗಾಯತ ಮತ್ತು ನೇಕಾರ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ಲಿಂಗಾಯತ ಸಮುದಾಯದ ಪ್ರಬಲ ನಾಯಕ ಯಡಿಯೂರಪ್ಪ ಮತ್ತು ನೇಕಾರ ಸಮುದಾಯದ ನಾಯಕಿ, ನಟಿ ಉಮಾಶ್ರೀ ಅವರ ನಡುವೆ ಪ್ರಬಲ ಸ್ಪರ್ಧೆ ನಿರೀಕ್ಷಿಸಬಹುದಾಗಿದೆ.