ಮುಂದುವರಿದ ಖಾತೆ ಸಂಗೀತ ಕುರ್ಚಿ: ಮತ್ತೆ ಸಚಿವರ ಖಾತೆ ಬದಲಾವಣೆಗೆ ಮುಂದಾದ ಸಿಎಂ!
Team Udayavani, Jan 25, 2021, 12:01 PM IST
ಬೆಂಗಳೂರು: ಅಳೆದು ತೂಗಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಂತರ ಖಾತೆ ಹಂಚಿಕೆಗೆ ಹರ ಸಾಹಸ ಮಾಡಬೇಕಾಗಿತ್ತು. ಆದರೆ ನಂತರ ಆರಂಭವಾದ ಅಸಮಾಧಾನದಿಂದ ಸಚಿವರ ಖಾತೆಯಲ್ಲಿ ಎರಡು ಬಾರಿ ಬದಲಾವಣೆಯಾಗುತ್ತಿದ್ದು, ಇದೀಗ ಮತ್ತೆ ಕೆಲವರ ಖಾತೆ ಬದಲಾವಣೆಗೆ ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ.
ಸಚಿವರುಗಳಾದ ಡಾ.ಸುಧಾಕರ್ ಮತ್ತು ಮಾಧುಸ್ವಾಮಿ ತಮ್ಮ ಖಾತೆ ಬದಲಾವಣೆಗೆ ಸಿಎಂ ಬಳಿ ಪಟ್ಟು ಹಿಡಿದಿದ್ದಾರೆ. ತಮ್ಮಲ್ಲಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ಹಿಂಪಡೆದ ಬಗ್ಗೆ ಸುಧಾಕರ್ ಮುನಿಸಿಕೊಂಡಿದ್ದು, ಆ ಖಾತೆಯನ್ನು ಮತ್ತೆ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಫಲವಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ ಇಲಾಖೆ ನೀಡಲು ಸಿಎಂ ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿದೆ.
ಇದನ್ನೂ ಓದಿ:ದೆಹಲಿ: ಸಿಂಘು ಗಡಿಯಲ್ಲಿ ಕಾಂಗ್ರೆಸ್ ಸಂಸದರ ಮೇಲೆ ಹಲ್ಲೆ, ಕಾರು ಜಖಂ
ಸದ್ಯ ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಮಾಧುಸ್ವಾಮಿ ಗೆ ಪ್ರವಾಸೋದ್ಯಮ ಇಲಾಖೆ ನೀಡಲು ಸಿಎಂ ಮುಂದಾಗಿದ್ದಾರೆ. ಮಾಧುಸ್ವಾಮಿಯವರು ಈ ಹಿಂದೆಯೂ ಈ ವೈದ್ಯಕೀಯ ಶಿಕ್ಷಣ ಖಾತೆಯ ಬಗ್ಗೆ ಸಂತೋಷವಾಗಿರಲಿಲ್ಲ. ಆದರೆ ಇದೀಗ ಮತ್ತೆ ಖಾತೆ ಬದಲಾವಣೆ ಮಾಡುತ್ತಿರುವ ಕಾರಣ ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರವಾಸೋದ್ಯಮ ಸಚಿವರಾಗಿರುವ ಆನಂದ್ ಸಿಂಗ್ ಅವರು ಮುಖ್ಯಮಂತ್ರಿಗಳ ಈ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜೀನಾಮೆಗೆ ಮುಂದಾದ ಮಾಧುಸ್ವಾಮಿ: ಮತ್ತೆ ಖಾತೆ ಬದಲಾವಣೆಯಿಂದ ಮುನಿಸಿಕೊಂಡ ಸಚಿವ ಮಾಧುಸ್ವಾಮಿ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಮಾಧುಸ್ವಾಮಿ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸಿಎಂ ಬಿಎಸ್ ವೈ ದೂರವಾಣಿ ಮೂಲಕ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರು ನಾಳೆ ಧ್ವಜಾರೋಹಣ ನಂತರ ಮಧ್ಯಾಹ್ನ ರಾಜಿನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.