ಬಿಎಸ್ವೈಗೆ ಜನರೇಬುದ್ಧಿ ಕಲಿಸಲಿದ್ದಾರೆ
Team Udayavani, Nov 4, 2017, 8:14 AM IST
ಬೆಂಗಳೂರು: “ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಏನೇ ಹೇಳಿದರೂ ಜನ ಕೇಳುವುದಿಲ್ಲ. ಜನರೇ ಅವರಿಗೆ ಬುದ್ಧಿ ಕಲಿಸುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದರು.
ನಗರದ ಅರಮನೆ ಮೈದಾನದಲ್ಲಿ ಇಂಡಿಯನ್ ರೋಡ್ಸ್ ಕಾಂಗ್ರೆಸ್ನ 78ನೇ ಸಮ್ಮೇಳನ ಉದ್ಘಾಟಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, “ಯಡಿಯೂರಪ್ಪ ಅವರು ರ್ಯಾಲಿ ಮಾಡಿದಷ್ಟೂ ನಮಗೆ ಲಾಭವಾಗಲಿದೆ’ ಎಂದರು.ಕೇಂದ್ರ ಸರ್ಕಾರದ ಅನುದಾನ ದುರುಪಯೋಗ ಕುರಿತಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, “ವಿಧಾನಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರಾಗಿ ಜಗದೀಶ ಶೆಟ್ಟರ್ ಇದ್ದಾರೆ. ಅವರು ಸದನದಲ್ಲಿ ಈ ಬಗ್ಗೆ ಕೇಳಲಿ. ಅಲ್ಲಿಯೇ ಉತ್ತರ ನೀಡುತ್ತೇನೆ’ ಎಂದು ತಿರುಗೇಟು ನೀಡಿದರು. ಟಿಪ್ಪು ಜಯಂತಿ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, “ಟಿಪ್ಪು ಜಯಂತಿ ವಿಚಾರ ಗೊತ್ತಿಲ್ಲದವರು ಏನೇನೋ ಮಾತನಾಡುತ್ತಾರೆ. ರಾಷ್ಟ್ರಪತಿಗಳೇ ಟಿಪ್ಪು ಸುಲ್ತಾನ್ ಸಾಧನೆ ಉಲ್ಲೇಖೀಸಿದ್ದಾರೆ. ಇತಿಹಾಸ ಗೊತ್ತಿರುವುದರಿಂದಲೇ ಜಯಂತಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ರಾಜಕೀಯ ಪಕ್ಷಗಳಿಗೆ ರ್ಯಾಲಿ ಅಗತ್ಯ. ಆದರೆ, ನಾವು ನಡೆಸುವ ರ್ಯಾಲಿಗೆ ಸದುದ್ದೇಶದ ಜೊತೆಗೆ ವಿಷಯಾಧಾರಿತ ಹಿನ್ನೆಲೆ ಇರಬೇಕು. ಕೇವಲ ಚುನಾವಣೆ ಉದ್ದೇಶದಿಂದ ನಡೆಸುವ ರ್ಯಾಲಿಗಳು ಜನರನ್ನು ಪೂರ್ಣ ಪ್ರಮಾಣದಲ್ಲಿ ತಲುಪಲು ಸಾಧ್ಯವಾಗುವುದಿಲ್ಲ. ಅಬ್ಬರದ ರ್ಯಾಲಿಗಳು ಒಂದಷ್ಟು ಯುವ ಜನರನ್ನು ತಲುಪಬಹುದು. ಆದರೆ, ಅದು ಯಾವುದೇ ಪಕ್ಷಕ್ಕೂ ಅಂತಿಮ ಯಶಸ್ಸನ್ನು ತಂದು ಕೊಡುವುದಿಲ್ಲ.
●ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ