ಎಲೆಕ್ಷನ್ ನಂತರ ಬಸ್ ಪ್ರಯಾಣ ದರ ಏರಿಕೆ
Team Udayavani, Mar 6, 2019, 1:35 AM IST
ಬೆಂಗಳೂರು: “ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆಯಾಗಲಿದೆ. ಮುಖ್ಯಮಂತ್ರಿ ಯವರು ತಕ್ಷಣಕ್ಕೆ ದರ ಏರಿಸುವುದು ಬೇಡ ಎಂದಿದ್ದಾರೆ’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾರಿಗೆ ನಿಗಮಗಳ ನಷ್ಟ ತಪ್ಪಿಸಲು ಶೇ.18ರಷ್ಟು ಪ್ರಯಾಣ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ, ಇನ್ನೂ ಆ ಬಗ್ಗೆ ತೀರ್ಮಾನವಾಗಿಲ್ಲ ಎಂದರು. ಮಾ.1 ರಿಂದ ಡೀಸೆಲ್ ದರ 3 ರೂ.ಹೆಚ್ಚಾಗಿದೆ. ಇದರಿಂದಾಗಿ, ಪ್ರತಿ ತಿಂಗಳು ಸಾರಿಗೆ ನಿಗಮ ಗಳಿಗೆ 15 ಕೋಟಿ ರೂ.ಹೆಚ್ಚುವರಿ ಹೊರೆಯಾಗುತ್ತಿದೆ. ಪ್ರಯಾಣ ದರ ಹೆಚ್ಚಳ ಸಂಬಂಧ ಸಿಎಂ ಜತೆ ಚರ್ಚಿಸಲಾಗಿದೆ ಎಂದರು.
ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್ಗಳನ್ನು ಪಡೆದು ಕಾರ್ಯಾಚರಣೆ ನಡೆಸಿದರೆ ನಿಗಮಕ್ಕೆ ನಷ್ಟವಾಗುತ್ತಿತ್ತು. ಆದುದರಿಂದ, ನಿಗಮವೇ ಖರೀದಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರಾಜ್ಯ ಸರ್ಕಾರ ಅನುಮತಿ ನೀಡದಿದ್ದರೂ ಅಧಿಕಾರಿಗಳೇ ಎಲೆಕ್ಟ್ರಿಕ್ ಬಸ್ಗಳನ್ನು ಬಾಡಿಗೆಗೆ ಪಡೆಯಲು ಮುಂದಾಗಿದ್ದರು ಎಂದರು.
25 ಲಕ್ಷ ರೂ.ದೇಣಿಗೆ : ಇದೇ ಸಂದರ್ಭದಲ್ಲಿ ಬಿಎಂಟಿಸಿ ವತಿಯಿಂದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನಕ್ಕೆ 25 ಲಕ್ಷ ರೂ.ಗಳ ದೇಣಿಗೆ ಚೆಕ್ ಅನ್ನು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಸಾಹಿತಿ ಡಾ.ಹಂಪ ನಾಗರಾಜಯ್ಯ ಹಾಗೂ ಡಾ.ಕಮಲಾ ಹಂಪನಾ ಅವರಿಗೆ ಹಸ್ತಾಂತರಿಸಿದರು.