ಜನವರಿ ಮೊದಲ ವಾರ ಸಂಪುಟ ವಿಸ್ತರಣೆ
Team Udayavani, Dec 26, 2019, 3:03 AM IST
ಹಾವೇರಿ: ಜನವರಿ ಮೊದಲ ವಾರ ಸಚಿವ ಸಂಪುಟ ವಿಸ್ತರಣೆ ಆಗುವ ನಿರೀಕ್ಷೆ ಇದೆ. ಹೀಗಾಗಿ, ಮುಂದಿನ ವರ್ಷ 2020ರಲ್ಲಿಯೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ನೂತನ ಶಾಸಕ ಬಿ.ಸಿ.ಪಾಟೀಲ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತಲ್ಲೀನರಾಗಿದ್ದಾರೆ.
ರಾಷ್ಟ್ರದಲ್ಲೂ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮಗ್ನರಾಗಿರುವುದ ರಿಂದ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳುವುದು ವಿಳಂಬವಾಗಿದೆ ಎಂದರು. ಮಂಗಳೂರಿನಲ್ಲಿ ಪಿತೂರಿಯಿಂದ ಗಲಭೆ ಆಗಿರುವುದು ವಿಡಿಯೋಗಳಿಂದ ಸಾಬೀತಾಗಿದೆ. ಪೊಲೀಸರ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಖಂಡನೀಯ.
ಪೊಲೀಸರು ತಮ್ಮ ಕುಟುಂಬವನ್ನೇ ಮರೆತು ಹೋರಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕೇ ಹೊರತು ದೂರುವುದು ಸರಿಯಲ್ಲ. ದೇಶದ ಆಂತರಿಕ ಭದ್ರತೆಗೆ ತೊಂದರೆ ಕೊಟ್ಟಾಗ ಗೋಲಿಬಾರ್ ನಡೆದರೆ ಗೃಹ ಸಚಿವರ ರಾಜೀನಾಮೆ ಕೇಳುವುದು ಮೂರ್ಖತನ ಎಂದರು.