ಸಂಪುಟ ವಿಸ್ತರಣೆ ಸನ್ನಿಹಿತ?
Team Udayavani, Jan 10, 2021, 6:10 AM IST
ಬೆಂಗಳೂರು: ಸಿಎಂ ಯಡಿಯೂರಪ್ಪ ಅವರು ರವಿವಾರ ದಿಢೀರ್ ದಿಲ್ಲಿಗೆ ತೆರಳಲಿದ್ದು, ಸಚಿವಾಕಾಂಕ್ಷಿಗಳಲ್ಲಿ ಮತ್ತೆ ಸಂಪುಟ ಸೇರುವ ಆಸೆ ಗರಿಗೆದರಿದೆ. ಕೇಂದ್ರ ನಾಯಕರಿಂದ ಒಪ್ಪಿಗೆ ದೊರೆತರೆ ಸಂಕ್ರಾಂತಿಗೆ ಮೊದಲೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ.
ಸಿಎಂ ರವಿವಾರ ಬೆಳಗ್ಗೆ ದಿಲ್ಲಿಗೆ ಪ್ರಯಾಣ ಬೆಳೆ ಸಿ ಅಲ್ಲಿ ಕೇಂದ್ರದ ಕೆಲವು ಸಚಿವರನ್ನು ಭೇಟಿ ಮಾಡಿ, ರಾಜ್ಯ ಅಭಿವೃದ್ಧಿ ಮತ್ತು ಅನುದಾನದ ವಿಚಾರವಾಗಿ ಚರ್ಚಿಸಲಿದ್ದಾರೆ. ಬಳಿಕ ಪಕ್ಷದ ಹಿರಿಯ ನಾಯಕರೊಂದಿಗೆ ಸಂಪುಟ ವಿಸ್ತರಣೆಯ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜತೆಗೆ ಮಾತುಕತೆ ನಿಗದಿಯಾಗಿಲ್ಲ. ಆದರೂ ಸಿಎಂ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಬಹುದು. ಸಂಪುಟ ವಿಸ್ತರಣೆಗೆ ಸಂಬಂಧಿಸಿ ಸಿಎಂಗೆ ಪರಮಾಧಿಕಾರ ನೀಡಲಾಗಿದೆ ಎಂದು ಈ ಹಿಂದೆ ರಾಜ್ಯ ಉಸ್ತು ವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿ ದ್ದರು. ಆದರೂ ಕೇಂದ್ರ ವರಿಷ್ಠರ ಅನುಮತಿ ಅಗತ್ಯವಿದ್ದು, ಸ್ಪಷ್ಟ ಸಂದೇಶ ಸಿಗುವ ಸಾಧ್ಯತೆಯಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜ. 16 ಮತ್ತು 17ರಂದು ರಾಜ್ಯ ಪ್ರವಾಸ ಮಾಡಲಿದ್ದಾರೆ. ಇದಕ್ಕೂ ಮೊದಲೇ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಂಕ್ರಾಂತಿಗೆ ಮುನ್ನ ಸಂಪುಟ ವಿಸ್ತರಣೆಗೆ ಅವಕಾಶ ನೀಡುವಂತೆ ಕೇಂದ್ರದ ವರಿಷ್ಠರಲ್ಲಿ ಯಡಿಯೂರಪ್ಪ ವಿನಂತಿಸಿಕೊಳ್ಳಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.