ಕೇಬಲ್ ವೈರ್ ಕಳ್ಳತನದ ಶಂಕೆ: ಯುವಕನ ಕೊಲೆ
Team Udayavani, Aug 22, 2017, 8:51 AM IST
ಬೆಂಗಳೂರು: ಕೇಬಲ್ ವೈರ್ ಕದ್ದಿದ್ದಾರೆಂದು ಆರೋಪಿಸಿ ಮೂವರು ಯುವರಕನ್ನು ಥಳಿಸಿ ಒಬ್ಬನನ್ನು ಕರೆಂಟ್ ಶಾಕ್ ಕೊಟ್ಟು ಕೊಲೆಗೈದಿರುವ ಭೀಕರ ಘಟನೆ ನಗರದ ಕುಂದಲಹಳ್ಳಿಯಲ್ಲಿ ಸೋಮವಾರ ನಡೆದಿದೆ.
ಪಶ್ಚಿಮ ಬಂಗಾಲ ಮೂಲದ ಬಷೀರ್(20ವರ್ಷ) ಹತ್ಯೆಗೀಡಾದ ದುರ್ದೈವಿ. ನಾಲ್ವರು ದುಷ್ಕರ್ಮಿಗಳು ಸೇರಿ ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಬಷೀರ್ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದು ಗುಜುರಿ ಕೆಲಸ ಹುಡುಕಿಕೊಂಡು ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಬಸುರೆಡ್ಡಿ ಎಂಬುವವರ ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ಈ ಮೂವರು ವಾಸವಾಗಿದ್ದರು.
ಕಳೆದ ಮೂರು ದಿನಗಳ ಹಿಂದೆ ಅದೇ ಜಮೀನಿನಲ್ಲಿ ಕೇಬಲ್ ವೈರ್ ಕಳವಾಗಿತ್ತು. ಹೀಗಾಗಿ ಈ ಮೂವರು ಕಳ್ಳತನ ಮಾಡಿರಬಹುದೆಂದು ಶಂಕಿಸಿ ಅವರನ್ನು ಖಾಲಿ ಗೋದಾಮೊಂದರಲ್ಲಿ ಕಟ್ಟಿ ಹಾಕಿ ಥಳಿಸಾದ್ದಾರೆ. ಇವರಲ್ಲಿ ಬಷೀರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಗೊಂಡಿರುವ ಹಫೀಸುಲ್ಲಾ ಮತ್ತು ಅಜ್ಮೈಲ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಮಾರತ್ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.