ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ತಂದೆ ಗಂಗಯ್ಯ ಹೆಗ್ಡೆ ನಿಧನ
Team Udayavani, Aug 26, 2019, 3:03 AM IST
ಮೈಸೂರು: ಕೆಫೆ ಕಾಫಿ ಡೇ ಮಾಲೀಕ, ಮೃತ ಸಿದ್ದಾರ್ಥ ಅವರ ತಂದೆ ಗಂಗಯ್ಯ ಹೆಗ್ಡೆ (96) ಭಾನುವಾರ ಮಧ್ಯಾಹ್ನ ನಿಧನರಾದರು. ಅನಾರೋಗ್ಯದಿಂದಾಗಿ ಕಳೆದ ಎರಡೂ ವರೆ ತಿಂಗಳಿಂದ ಮೈಸೂರಿನ ನಜರ್ಬಾದ್ನಲ್ಲಿರುವ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯ, ಸಂಬಂಧಿ ಡಾ.ಸಂತೃಪ್ತ್ ಖಚಿತಪಡಿಸಿದ್ದಾರೆ.
ಮನೆಯಲ್ಲಿ ಜಾರಿ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಜೂ.9 ರಂದು ಸಂಬಂಧಿಕರ ಆಸ್ಪತ್ರೆಯಾದ ಗೋಪಾಲಗೌಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಗಂಗಯ್ಯ ಹೆಗ್ಡೆ ಆಸ್ಪತ್ರೆಯಲ್ಲಿರುವಾಗಲೇ ಬೀಗರಾದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಮತ್ತು ಅವರ ಪತ್ನಿ ಪ್ರೇಮಾ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿಕೊಂಡು ಹೋಗಿದ್ದರು.
ಅಲ್ಲದೇ ಪುತ್ರ ಸಿದ್ದಾರ್ಥ ಮತ್ತು ಸೊಸೆ ಮಾಳವಿಕಾ ಆಗಾಗ್ಗೆ ಮೈಸೂರಿಗೆ ಬಂದು ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದರು. ಈ ಮಧ್ಯೆ, ಕಳೆದ ಜು.31ರಂದು ಪುತ್ರ ಸಿದ್ದಾರ್ಥ ಆತ್ಮಹತ್ಯೆ ಮಾಡಿಕೊಂಡ ವಿಷಯ ವನ್ನೂ ಗಂಗಯ್ಯ ಹೆಗ್ಡೆ ಅವರಿಗೆ ತಿಳಿಸದೆ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಅಂದಿ ನಿಂ ದಲೂ ಚಿಕಿತ್ಸೆ ಪಡೆಯುತ್ತಿದ್ದ ಗಂಗಯ್ಯ ಹೆಗ್ಡೆ, ಭಾನುವಾರ ಸಂಜೆ 3 ಗಂಟೆಯ ವೇಳೆಗೆ ಮೃತಪಟ್ಟಿದ್ದಾರೆ.
ಸಂಜೆ 4 ಗಂಟೆ ಹೊತ್ತಿಗೆ ಮೃತರ ಶವವನ್ನು ಸ್ವಗ್ರಾಮವಾದ ಚಿಕ್ಕ ಮಗಳೂರಿನ ಮೂಡಿಗೆರೆ ಚೇತನಹಳ್ಳಿ ಎಸ್ಟೇಟ್ಗೆ ತೆಗೆದುಕೊಂಡು ಹೋಗಲಾಯಿತು. ಸೋಮವಾರ ಬೆಳಗ್ಗೆ 11ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಸಂಬಂಧಿ ಡಾ. ಸಂತೃಪ್ತ್ ತಿಳಿಸಿದ್ದಾರೆ. ಈ ವೇಳೆ ಪತ್ನಿ ವಾಸಂತಿ ಹೆಗ್ಡೆ, ಸೊಸೆ ಮಾಳವಿಕಾ, ಮೊಮ್ಮಕ್ಕಳಾದ ಇಶಾನ್, ಅಮರ್ಥ್ ಜತೆಗಿದ್ದರು.