ನಿಂತಿದ್ದ ಕ್ಯಾಂಟರ್ಗೆ ಕಾರು ಡಿಕ್ಕಿ: ಕಿರುತೆರೆ ನಟಿ, ನಟ ಸಾವು
Team Udayavani, Aug 24, 2017, 7:38 AM IST
ಬೆಂಗಳೂರು: ನಿಂತಿದ್ದ ಟ್ಯಾಂಕರ್ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಿರುತೆರೆ ನಟಿ ಹಾಗೂ ಸಹನಟ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಲ್ಯಾಂಕೋ ಟೋಲ್ ರಸ್ತೆಯ ಸೋಲೂರು ಬಳಿ ಬುಧವಾರ ತಡರಾತ್ರಿ ನಡೆದಿದೆ.
ಕಿರುತೆರೆ ನಟಿ ರಚನಾ(23ವರ್ಷ) ಹಾಗೂ ಸಹ ನಟ ಜೀವನ್ ಮೃತಪಟ್ಟವರು. ಸಹ ನಟ ಕಾರ್ತಿಕ್ ಅವರ ಹುಟುಹಬ್ಬದ ನಿಮಿತ್ತ ಕುಕ್ಕೆ ಸುಬ್ರಮಣ್ಯ ದೇವರ ದರ್ಶನ ಪಡೆದು ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸಹ ನಟರಾದ ರಂಜಿತ್, ಉತ್ತಮ್, ಹೊನ್ನೇಶ್, ಕಾರ್ತಿಕ್, ಎರಿಕ್ ಸಣ್ಣಪುಟ್ಟ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಟಿ ರಚನಾ ಮಹಾನದಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಮಧುಬಾಲ, ತ್ರಿವೇಣಿ ಸಂಗಮ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಮಾಗಡಿಯ ಕುದೂರು ಠಾಣಿ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.