ಸಿಎಂ ಬಸ್ ಅಡ್ಡಗಟ್ಟಿದ 50 ಕಾರ್ಮಿಕರ ವಿರುದ್ಧ ಕೇಸ್
Team Udayavani, Jun 30, 2019, 3:00 AM IST
ರಾಯಚೂರು: ಗ್ರಾಮ ವಾಸ್ತವ್ಯಕ್ಕೆಂದು ಜಿಲ್ಲೆಗೆ ಆಗಮಿಸಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ಯರಮರಸ್ ಬಳಿಯ ಅತಿಥಿಗೃಹದಿಂದ ಕರೇಗುಡ್ಡಕ್ಕೆ ತೆರಳುವಾಗ ಬಸ್ ಅಡ್ಡಲಾಗಿ ನಿಂತು ಪ್ರತಿಭಟನೆ ನಡೆಸಿದ 50 ಜನ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.
ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ಕಾರ್ಯದರ್ಶಿ ಅಮರೇಶ, ಸದಸ್ಯ ಜಿ.ಅಡವಿರಾವ್, ರವಿಚಂದ್ರ, ರಾಮರೆಡ್ಡಿ ಸೇರಿ 50 ಕಾರ್ಮಿಕರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಈ ಎಲ್ಲರೂ ದುರುದ್ದೇಶದಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಹೋಗಿ ಬರುವವರಿಗೆ ಅಡ್ಡಿಪಡಿಸುತ್ತಿದ್ದ ಕಾರಣಕ್ಕೆ ಗ್ರಾಮೀಣ ಠಾಣೆ ಪಿಎಸ್ಐ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅ ಧೀಕ್ಷಕರು ತಿಳಿಸಿದ್ದಾರೆ. ಇನ್ನು ಇದೇ ವಿಚಾರದಲ್ಲಿ ಭದ್ರತಾ ವೈಫಲ್ಯಕ್ಕೆ ಕಾರಣರಾದ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿತ್ತು.