ಮೋದಿ ವಿರುದ್ಧ ಪ್ರಚೋದನೆ: ಮೇವಾನಿ ವಿರುದ್ಧ ಕೇಸು
Team Udayavani, Apr 7, 2018, 12:26 PM IST
ಬೆಂಗಳೂರು : “ರಾಜಕಾರಣದಲ್ಲಿ ಯುವಕರ ಪಾತ್ರ ಇಂದು ಮಹತ್ವದ್ದಾಗಿದೆ. ಇದೇ ಎಪ್ರಿಲ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದು ಸಾರ್ವಜನಿಕ ಭಾಷಣ ಮಾಡುವಾಗ ನೀವು ಜನಸಮೂಹದೊಂದಿಗೆ ಸೇರಿಕೊಂಡು ಮೋದಿ ಅವರತ್ತ ಕುರ್ಚಿಗಳನ್ನು ಎಸೆದು ಸಭೆಗೆ ತೊಂದರೆ ಕೊಡಿ’ ಎಂದು ಚಿತ್ರದುರ್ಗದಲ್ಲಿ ನಿನ್ನೆ ಶುಕ್ರವಾರ ಜನಸಮೂಹವೊಂದನ್ನು ಉದ್ದೇಶಿಸಿ ಪ್ರಚೋದನಾತ್ಮಕ ಭಾಷಣ ಮಾಡಿದ್ದ ದಲಿತ ನಾಯಕ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಗಳ ಸಂಚಾರಿ ದಳ ನೀಡಿದ್ದ ದೂರಿನ ಮೇರೆಗೆ ಜಿಗ್ನೇಶ್ ಮೇವಾನಿ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
“ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದಾಗ ನೀವು ಅವರನ್ನು ಪ್ರಶ್ನಿಸಬೇಕು : ಪ್ರತೀ ವರ್ಷ 2 ಕೋಟಿ ಉದ್ಯೋಗ ದೊರಕಿಸುವುದಾಗಿ ನೀಡಿದ್ದ ಭರವಸೆ ಏನಾಯಿತು ? ಎಂದು ಕೇಳಿ. ಅದಕ್ಕವರು ಉತ್ತರ ಕೊಡದಿದ್ದರೆ “ನೀವು ಹಿಮಾಲಯಕ್ಕೆ ಹೋಗಿ ಮಲಗಿಕೊಳ್ಳಿ ಅಥವಾ ರಾಮ ಮಂದಿರದಲ್ಲಿ ಗಂಟೆ ಬಾರಿಸಿ’ ಎಂದು ಹೇಳಿ’ ಎಂಬುದಾಗಿ ಮೇವಾನಿ ಹೇಳಿದ್ದರು.