ವಿಧಾನಸೌಧದಲ್ಲಿ ನಗದು ಪತ್ತೆ ಕೇಸ್; ಪುಟ್ಟರಂಗಶೆಟ್ಟಿಗೆ ಎಸಿಬಿ ನೋಟಿಸ್
Team Udayavani, Feb 14, 2019, 8:07 AM IST
ಬೆಂಗಳೂರು: ವಿಧಾನಸೌಧದಲ್ಲಿ ದಾಖಲೆ ಇಲ್ಲದ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಿ.ಪುಟ್ಟರಂಗ ಶೆಟ್ಟಿಗೆ ಎಸಿಬಿ ಗುರುವಾರ ನೋಟಿಸ್ ಜಾರಿ ಮಾಡಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರ ಕಚೇರಿಯ ಟೈಪಿಸ್ಟ್ ಮೋಹನ್, ದಾಖಲೆ ಇಲ್ಲದ 25.76 ಲಕ್ಷ ರೂಪಾಯಿ ಹಣ ಸಾಗಿಸುತ್ತಿದ್ದ ವೇಳೆಯಲ್ಲಿ ವಿಧಾನಸೌಧದ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದ. ಈ ಪ್ರಕರಣ ರಾಜಕೀಯವಾಗಿ ಭಾರೀ ಜಟಾಪಟಿಗೆ ಕಾರಣವಾಗಿತ್ತು.
ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಎಸಿಬಿ ಇದೀಗ ಸಚಿವರ ಕಚೇರಿಯ ಟೈಪಿಸ್ಟ್ ಮೋಹನ್, ಮಾಜಿ ಪಿಎಗಳಾದ ಮಂಜುನಾಥ್, ಕೃಷ್ಣಮೂರ್ತಿ ಹಾಗೂ ಗುತ್ತಿಗೆದಾರರಾದ ಸತೀಶ್, ಉಮೇಶ್, ಜ್ಯೋತಿಪ್ರಕಾಶ್ ವಿಚಾರಣೆ ನಡೆಸಿದೆ. ಅಲ್ಲದೇ ಮೂರು ದಿನಗಳ ಒಳಗೆ ಹಾಜರಾಗುವಂತೆ ಪುಟ್ಟರಂಗ ಶೆಟ್ಟಿಯವರಿಗೆ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ನೋಟಿಸ್ ಜಾರಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.