ಕಾವೇರಿ ನದಿ ಸ್ವಚ್ಛತೆ: ಸರ್ಕಾರದಿಂದ ಮಾಹಿತಿ
Team Udayavani, Dec 12, 2019, 3:00 AM IST
ಬೆಂಗಳೂರು: ಕಾವೇರಿ ನದಿಗೆ ಹರಿದು ಬರುವ ಒಳಚರಂಡಿ ನೀರು ಮತ್ತು ತ್ಯಾಜ್ಯ ತಡೆಯುವ ವಿಚಾರಕ್ಕೆ ಸಂಬಂಧಿಸಿದ “ಸಮಗ್ರ ಯೋಜನಾ ವರದಿ’ (ಡಿಪಿಆರ್) ಬಗ್ಗೆ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ಸಲ್ಲಿಸಿದೆ. ಕಾವೇರಿ ನದಿ ಸ್ವಚ್ಛತೆಗೆ ಸಂಬಂಧಿಸಿದಂತೆ ಎಸ್.ಇ.ಜಯಂತ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಬುಧವಾರ ಹಿರಿಯ ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬಂದಿತ್ತು.
ಆಗ, ಸರ್ಕಾರದ ಪರ ವಕೀಪಿ ಪಿ.ಬಿ.ಅಚ್ಚಪ್ಪ ಅವರು ಪ್ರಮಾಣಪತ್ರ ಸಲ್ಲಿಸಿ, ಈ ಕುರಿತಂತೆ ಸಮಗ್ರ ಯೋಜನಾ ವರದಿ ತಯಾರಿಸುವ ದಿಸೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲಿಕರಣ ವಿಭಾಗವು, ಏಜೆನ್ಸಿಯೊಂದನ್ನು ನಿಯುಕ್ತಿಗೊಳಿಸಿದೆ. ಈ ಏಜೆನ್ಸಿಯು 2020ರ ಫೆಬ್ರುವರಿ 3ರೊಳಗೆ ತನ್ನ ಕೆಲಸವನ್ನು ಪೂರೈಸಲಿದೆ. ಬಳಿಕ ಮುಂದಿನ 15 ದಿನಗಳಲ್ಲಿ ಸರ್ಕಾರ ಅಲ್ಪಾವಧಿ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಸಲಿದೆ ಎಂದು ವಿವರಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆ ಮುಂದೂಡಿತು.