ಕಾವೇರಿ ನೀರು ಹಂಚಿಕೆಗೆ ಹೊಸ ಒಪ್ಪಂದವಾಗಲಿ
Team Udayavani, Jul 12, 2017, 3:40 AM IST
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಬ್ರಿಟಿಷರ ಕಾಲದಲ್ಲಿ ಆಗಿರುವ ಒಪ್ಪಂದಗಳನ್ನು ರದ್ದುಪಡಿಸಿ, ಹೊಸ ಒಪ್ಪಂದದ ಮೂಲಕ ಕಾವೇರಿ ನೀರಿನ ಮರು ಹಂಚಿಕೆ ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದೆ.
ಮಂಗಳವಾರ ಆರಂಭವಾದ ಅಂತಿಮ ವಿಚಾರಣೆಯ ಮೊದಲ ದಿನ ರಾಜ್ಯದ ಪರವಾಗಿವಾದ ಮಂಡಿಸಿದ ಹಿರಿಯ ವಕೀಲ ಫಾಲಿ ಎಸ್.ನಾರಿಮನ್, ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಬ್ರಿಟಿಷರ ಕಾಲದಲ್ಲಿ ಮಾಡಿಕೊಂಡಿ
ರುವ ಒಪ್ಪಂದಗಳಿಗೆ ಸಂವಿಧಾನ ಅಸ್ತಿತ್ವಕ್ಕೆ ಬಂದ ಮೇಲೆ ಮಾನ್ಯತೆ ಇಲ್ಲ. ಹಾಗಾಗಿ ಅವುಗಳನ್ನು ಪರಿಗಣಿಸಬಾರದು ಎಂದು ಪ್ರತಿಪಾದಿಸಿದರು. ಸ್ವಾತಂತ್ರ್ಯ ಪೂರ್ವದ 1892 ಹಾಗೂ 1924ರಲ್ಲಿ ಬ್ರಿಟಿಷ್ ಸರ್ಕಾರ ಮದ್ರಾಸ್ ಮತ್ತು ಮೈಸೂರ ಸಂಸ್ಥಾನಗಳ ನಡುವೆ ಒಪ್ಪಂದ ಮಾಡಿಸಿದ್ದು, ಬ್ರಿಟಿಷರ ನೇರ ಆಳ್ವಿಕೆಯಿದ್ದ ತಮಿಳುನಾಡಿಗೆ ಪ್ರಾಧಾನ್ಯತೆ ನೀಡಲಾಗಿದೆ. ಇದರಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಹೀಗಾಗಿ ಅಂದಿನ ಒಪ್ಪಂದವನ್ನು ರದ್ದು ಪಡಿಸಿ ಹೊಸ ಒಪ್ಪಂದಗಳನ್ನು ರೂಪಿಸಿ ನೀರಿನ ಹಂಚಿಕೆ ಮಾಡಬೇಕು. ಕರ್ನಾಟಕ ಅಭಿವೃದ್ಧಿಯಾಗುತ್ತಿದ್ದು, ಬೆಂಗಳೂರು ಸಾಕಷ್ಟು
ಬೆಳವಣಿಗೆಯಾಗಿದೆ. ಬೆಂಗಳೂರಿಗೆ ಹೆಚ್ಚಿನ ಕುಡಿಯುವ ನೀರಿನ ಅಗತ್ಯವಿದ್ದು, ನ್ಯಾಯಾಲಯ ಇಂದಿನ ಅಗತ್ಯವನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದ ಪರ ವಾದ ಆಲಿಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು. ಹದಿನೈದು ದಿನದಲ್ಲಿ ವಿಚಾರಣೆ ಪೂರ್ಣಗೊಳಿಸು ವುದಾಗಿ ಪೀಠ ತಿಳಿಸಿದೆ.