ನಿಂಬಾಳ್ಕರ್, ಹಿಲೋರಿ ವಿರುದ್ಧ ಸಿಬಿಐ ತನಿಖೆಗೆ ಅಸ್ತು
ಐಎಂಎ ಮನ್ಸೂರ್ ಖಾನ್ನಿಂದ ಲಂಚ ಪಡೆದಿದ್ದ ಅಧಿಕಾರಿಗಳು
Team Udayavani, Sep 15, 2020, 6:20 AM IST
ಬೆಂಗಳೂರು: ಬಹುಕೋಟಿ ರೂಪಾಯಿ ಮೌಲ್ಯದ ಐ ಮಾನಿಟರಿ ಅಡ್ವೈಸ್ (ಐಎಂಎ) ಹಗರಣದಲ್ಲಿ ಸಿಲುಕಿರುವ ಐಪಿಎಸ್ ಅಧಿಕಾರಿಗಳಾದ ಐಜಿಪಿ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ಸಹಿತ ಐವರು ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಸಲು ರಾಜ್ಯ ಸರಕಾರ ಅನುಮತಿ ನೀಡಿದೆ.
ಸಾವಿರಾರು ಮಂದಿಯನ್ನು ವಂಚಿಸಿರುವ ಐಎಂಎ ಕಂಪೆನಿಗೆ ಸಹಕಾರ ನೀಡಿದ ಆರೋಪ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ, ಎಸ್ಪಿ ಇ.ಬಿ. ಶ್ರೀಧರ, ಪೊಲೀಸ್ ಇನ್ಸ್ಪೆಕ್ಟರ್ ಎಂ. ರಮೇಶ್, ಪಿಎಸ್ಐ ಗೌರಿಶಂಕರ್ ಅವರ ಮೇಲಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಯು ಆರೋಪಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡುವಂತೆ ರಾಜ್ಯ ಸರಕಾರವನ್ನು ಕೋರಿತ್ತು.
ಈಗ ರಾಜ್ಯ ಸರಕಾರ ತನಿ ಖೆಗೆ ಸಮ್ಮತಿ ನೀಡಿರುವುದರಿಂದ ತನಿಖೆಗೆ ವೇಗ ಸಿಗಲಿದೆ. ಈಗಾಗಲೇ ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಗತ್ಯವೆನಿಸಿದರೆ ಮತ್ತೂಮ್ಮೆ ವಿಚಾರಣೆಗೆ ಕರೆಯಲಾಗುತ್ತದೆ. ಆರೋಪಿ ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಹೈಕೋರ್ಟ್ ಸೂಚನೆ ಮೇರೆಗೆ ಸಿಬಿಐಯು ಐಎಂಎ ಬಹುಕೋಟಿ ರೂ. ಹಗರಣದ ತನಿಖೆ ನಡೆಸುತ್ತಿದ್ದು, ಈಗಾಗಲೇ ಹಲವು ಆರೋಪಿ ಗಳನ್ನು ಬಂಧಿಸಿ ಬಹುತೇಕ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಆರೋಪಗಳೇನು?
ಸಿಐಡಿಯಲ್ಲಿ 2018-19ರ ಅವಧಿಯಲ್ಲಿ ಐಜಿಪಿ ಆಗಿದ್ದ ಹೇಮಂತ್ ನಿಂಬಾಳ್ಕರ್, ಆರ್ಬಿಐ ಸೂಚನೆ ಮೇರೆಗೆ ಐಎಂಎ ವಿರುದ್ಧ ತನಿಖೆ ನಡೆಸಿದ್ದರು. ಆದರೆ ಮನ್ಸೂರ್ ಅಲಿ ಖಾನ್ಗೆ ಅನುಕೂಲಕರ ವರದಿ ಸಲ್ಲಿಸಿದ್ದರು. ಅಲ್ಲದೆ ಐಎಂಎ ಪರವಾಗಿ ಕೆಲಸ ಮಾಡುವಂತೆ ಅಂದಿನ ಉಪವಿಭಾಗಾಧಿಕಾರಿ ಎಲ್. ಸಿ. ನಾಗರಾಜು ಮೇಲೆ ಒತ್ತಡ ಹೇರಿದ್ದರು. ಈ ಕೆಲಸಗಳಿಗೆ ಮನ್ಸೂರ್ ಖಾನ್ನಿಂದ ಭಾರೀ ಮೊತ್ತದ ಹಣ ಮತ್ತು ವಸ್ತುಗಳನ್ನು ಪಡೆದಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ.
2017ರಿಂದ 2018ರ ವರೆಗೆ ಡಿಸಿಪಿ ಆಗಿದ್ದ ಅಜಯ್ ಹಿಲೋರಿ, ಐಎಂಎ ಅವ್ಯವಹಾರಗಳ ಕುರಿತ ದೂರುಗಳ ಬಗ್ಗೆ ತನಿಖೆ ನಡೆಸದಂತೆ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಐಎಂಎ ಅವ್ಯವಹಾರಗಳ ಬಗ್ಗೆ ಆರ್ಬಿಐಗೆ ವರದಿ ಸಲ್ಲಿಕೆಯಾಗದಂತೆ, ತನಿಖೆ ವಿಳಂಬವಾಗು ವಂತೆ ನೋಡಿಕೊಂಡಿದ್ದರು. ಇದಕ್ಕೆ ಹಣ, ವಸ್ತುಗಳನ್ನು ಪಡೆದಿದ್ದರು ಎಂಬ ಆರೋಪವಿದೆ.