ಡಿಕೆ ಸಾಮ್ರಾಜ್ಯದ ಮೇಲೆ ಸಿಬಿಐ ದಾಳಿ: ಬಿಜೆಪಿ ಸರ್ಕಾರದ ವಿರುದ್ಧ ಗರಂ ಆದ ಕೈ ನಾಯಕರು
Team Udayavani, Oct 5, 2020, 10:12 AM IST
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್ ನ ಟ್ರಬಲ್ ಶೂಟರ್ ಗೆ ಇಂದು ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಡಿಕೆಶಿ ಮತ್ತು ಸಹೋದರ ಡಿ ಕೆ ಸುರೇಶ್ ಅವರಿಗೆ ಸೇರಿದ ಮನೆಗಳಿಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಬೆಂಗಳೂರು ಸಿಬಿಐ ಘಟಕದ ಪೊಲೀಸರು ಇಂದು ಬೆಳಿಗ್ಗೆ ಆರು ಗಂಟೆಗೆ ಸುಮಾರು 15 ಕಡೆ ದಾಳಿ ಮಾಡಿದ್ದಾರೆ. ಬೆಂಗಳೂರಿನ ಸದಾಶಿವ ನಗರದ ಮನೆ, ಡಿ ಕೆ ಸುರೇಶ್ ಅವರ ಮನೆ, ರಾಮನಗರದ ಆಲಹಳ್ಳಿಯಲ್ಲಿರುವ ಡಿಕೆಶಿ ಮನೆ ಸೇರಿದಂತೆ ಸುಮಾರು 15 ಕಡೆಗಳಲ್ಲಿ ದಾಳಿ ಮಾಡಲಾಗಿದೆ.
ಕಾಂಗ್ರೆಸ್ ಗರಂ
ಕೆಪಿಸಿಸಿ ಅಧ್ಯಕ್ಷರ ಮನೆಗೆ ದಾಳಿ ನಡೆಸಿದ್ದನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ರಣದೀಪ್ ಸುರ್ಜೇವಾಲ, ಸಿದ್ದರಾಮಯ್ಯ ಸೇರಿ ಹಲವು ನಾಯಕರು, ಈ ದಾಳಿ ಬಿಜೆಪಿ ಸರ್ಕಾರದ ಪ್ರತೀಕಾರದ ರಾಜಕೀಯ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಡಿಕೆ ಶಿವಕುಮಾರ್,ಡಿಕೆ ಸುರೇಶ್ ಮನೆ ಮೇಲೆ ಸಿಬಿಐ ದಾಳಿ: ಟ್ರಬಲ್ ಶೂಟರ್ ಗೆ ಮತ್ತೊಂದು ಟ್ರಬಲ್
ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಮನೆ ಮೇಲೆ ನರೇಂದ್ರ ಮೋದಿ ಸರ್ಕಾರ ನಡೆಸಿರುವ ಸಿಬಿಐ ದಾಳಿ ರಾಜಕೀಯ ದುಷ್ಟತನದ ಪರಮಾವಧಿ. ಇದು ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಿಕ್ಕಾಗದ ಬಿಜೆಪಿ ನಾಯಕರ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಮೋದಿ-ಯಡಿಯೂರಪ್ಪ ಜೋಡಿಯು ತನ್ನ ಬೆದರಿಕೆ ಮತ್ತು ಕುತಂತ್ರಗಳ ಕಪಟ ಆಟದಿಂದ ತನ್ನ ಕೈಗೊಂಬೆ ಸಿಬಿಐ ಮೂಲಕ ಡಿಕೆ ಶಿವಕುಮಾರ್ ಅವರ ಮೇಲೆ ದಾಳಿ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ಹೇಳಿದ್ದಾರೆ.