ಛಲವಾದಿ ಸಮಾಜದವರು ಒಡೆದಾಳುವ ನೀತಿ ಅನುಸರಿಸಿದವರಲ್ಲ
Team Udayavani, Feb 25, 2019, 12:30 AM IST
ದಾವಣಗೆರೆ: “ಅವಕಾಶ ಸಿಕ್ಕಾಗಲೆಲ್ಲಾ ಛಲವಾದಿ ಸಮಾಜದವರು ತುಳಿತಕ್ಕೆ ಒಳಗಾಗಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಛಲವಾದಿ ಮಹಾಸಭಾ ಶ್ರೀಶಿವಯೋಗಿ ಮಂದಿರದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಮತ್ತು ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
“ತುಳಿತಕ್ಕೊಳಗಾಗಿರುವುದನ್ನು ತಿಳಿಸಬೇಕಲ್ಲದೆ, ಆ ತುಳಿತಕ್ಕೆ ಎದುರಾಗಿನಿಲ್ಲಬೇಕೆಂಬ ಉದ್ದೇಶದಿಂದಲೇ ಈ ಸಮಾವೇಶಕ್ಕೆ ಬಂದಿದ್ದೇನೆ. ನಿಮ್ಮ ಸಂಘಟನೆಯೇ ನನಗೆ ಶಕ್ತಿ ತುಂಬಬೇಕಿದೆ’ ಎಂದರು. ಛಲವಾದಿ ಸಮಾಜದವರು ಸದಾ ತುಳಿತಕ್ಕೆ, ಶೋಷಣೆಗೊಳಗಾಗಿದ್ದಾರೆ. ಆದರೆ, ನಾವು ಎಂದೂ ವರ್ಗೀಕರಣ ಮಾಡಿದವರಲ್ಲ. ನಾನು ಮತ್ತು ಮಲ್ಲಿಕಾರ್ಜುನ ಖರ್ಗೆ ಒಡೆದಾಳುವ ನೀತಿ ಅನುಸರಿಸಿದವರಲ್ಲ. ಈ ಹಿಂದೆ ಮಹಾಸಭಾ ರಚಿಸುವ ಬಗ್ಗೆ ಪ್ರಸ್ತಾಪಿಸಿದಾಗ ನಾವಿಬ್ಬರೂ ಬೆಂಬಲ ನೀಡಲಿಲ್ಲ. ಏಕೆಂದರೆ ನಾವು ಬಾಬಾಸಾಹೇಬ್ ಅಂಬೇಡ್ಕರ್ ಅನುಯಾಯಿಗಳು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.
ಅನಿವಾರ್ಯತೆ ಎದುರಾಗಿದೆ. ತುಳಿತದ ವಿರುದ್ಧ ಹೋರಾಟ ನಡೆಸಲೇ ಬೇಕಿದೆ. ಸಮುದಾಯದಲ್ಲಿ ಹೋರಾಟದ ಕಿಚ್ಚು ಬರಬೇಕಿದೆ. ಆ ಹೋರಾಟದ ನೇತೃತ್ವವನ್ನು ಯುವ ಮುಖಂಡ ಪ್ರಿಯಾಂಕ್ ಖರ್ಗೆ ಹೊರಬೇಕಿದೆ. ಸಂಘಟನೆ ಮೂಲಕ ಸಮುದಾಯ ಬಲಿಷ್ಠ ಪಡಿಸಬೇಕಿದೆ ಎಂದು ಆಶಿಸಿದರು.