ಉಪ ಚುನಾವಣೆ ಬಳಿಕ ಬದಲಾವಣೆ ನಿರೀಕ್ಷಿತ
Team Udayavani, Nov 28, 2019, 3:05 AM IST
ಮೈಸೂರು: ಮಹಾರಾಷ್ಟ್ರದಲ್ಲಾದ ದಿಢೀರ್ ರಾಜಕೀಯ ಬೆಳವಣಿಗೆಗಳು ಕರ್ನಾಟಕದ ರಾಜಕಾರಣಕ್ಕೂ ಅನ್ವಯ ವಾಗಬಹುದು. ಉಪ ಚುನಾವಣೆ ಫಲಿತಾಂಶದ ನಂತರ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾರ್ಮಿಕವಾಗಿ ನುಡಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇದೇ ವೇಳೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹರಿಹಾಯ್ದವರು, ಅವರು ಎಷ್ಟು ದುಡ್ಡು ಸಾಗಿಸಿದರು ಯಾರೂ ಕೇಳುತ್ತಿಲ್ಲ. ಅದಕ್ಕೇ 15ಕ್ಕೆ 15 ಕ್ಷೇತ್ರವನ್ನೂ ಗೆಲ್ಲುತ್ತೇವೆ ಅನ್ನುತ್ತಿದ್ದಾರೆ. ಯಡಿಯೂರಪ್ಪ ಬಳಿ ಸರ್ಕಾರ ಇದೆ, ಗುಪ್ತವಾರ್ತೆ ದಳ ಇದೆ. ಬಿಜೆಪಿಯವರು ಎಲ್ಲೆಲ್ಲಿ ಹಿಂದೆ ಬಿದ್ದಿದ್ದಾರೆ ಎಂಬುದನ್ನು ಗುಪ್ತವಾರ್ತೆಯವರು ತಕ್ಷಣವೇ ತಿಳಿಸುತ್ತಿದ್ದಾರೆ. ಆರ್ಥಿಕವಾಗಿಯೂ ಅವರಿಗೆ ಶಕ್ತಿ ಇದೆ.
ಹೀಗಾಗಿ, 15 ಕ್ಷೇತ್ರವನ್ನೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲಾÉ ಅನರ್ಹ ಅಭ್ಯರ್ಥಿಗಳಿಗೂ ಎಷ್ಟು ಹಣ ಬೇಕೋ ಕೇಳಿ ಎಂದಿದ್ದಾರೆ. ಎಲ್ಲಾ ಕ್ಷೇತ್ರಗಳಿಗೂ ಮಂತ್ರಿಗಳನ್ನು ಬಿಟ್ಟು ನೀವು ಚುನಾವಣೆ ಮುಗಿಸಿಯೇ ಬರಬೇಕು ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ. ಮಂತ್ರಿಗಳಿಗೂ ಹಣ ಬೇಕಿದ್ದರೆ ಅಲ್ಲಿಂದಲೇ ಫೋನ್ ಮಾಡಿ ನಾನು ಕಳುಹಿಸುತ್ತೇನೆ ಎಂದಿದ್ದಾರೆ. ಅವರು ಎಷ್ಟು ಹಣ ಸಾಗಿಸಿದರೂ ಯಾರು ಕೇಳುವವರಿಲ್ಲ. ಇಷ್ಟೆಲ್ಲ ನಡೆಯುತ್ತಿರಬೇಕಾದರೆ ನಾವೇನು ಮಾಡೋಕಾಗುತ್ತೆ?. ಯಡಿಯೂರಪ್ಪ ಈ ಉಪ ಚುನಾವಣೆಯನ್ನು ದುಡ್ಡಿನಿಂದಲೇ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.