ಯಡಿಯೂರಪ್ಪ ಮಹಾನ್ ಭಂಡ;ಇಷ್ಟು ಹೊತ್ತಿಗೆ ಜೈಲಲ್ಲೇ ಇರ್ಬೇಕಿತ್ತು
Team Udayavani, Feb 12, 2017, 12:41 PM IST
ಮೈಸೂರು: ಕಾಂಗ್ರೆಸ್ ಹೈಕಮಾಂಡ್ಗೆ ಒಂದು ಸಾವಿರ ಕೋಟಿ ರೂ. ಕೊಟ್ಟು ಕುರ್ಚಿ ಉಳಿಸಿಕೊಂಡಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಾಡಿರುವ ಗಂಭೀರ ಆರೋಪಕ್ಕೆ ನೇರ ಉತ್ತರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ವಿರುದ್ಧ ಕೆಂಡಾ ಮಂಡಲವಾದರು. ಬೇಜವಾಬಾœರಿಯುತ, ಆಧಾರ ರಹಿತ ರಾಜಕೀಯ ದುರುದ್ದೇಶದ ಹೇಳಿಕೆಗಳಿಗೆ ಉತ್ತರಿಸುವುದಿಲ್ಲ. ಕಾನೂನು ಹೋರಾಟದ ಬಗ್ಗೆ ನಾವು ಯೋಚಿಸಿದ್ದೇವೆ ಎಂದರು.
ಯಡಿಯೂರಪ್ಪ ಮಾತು ಭೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದಂದಾಗಿದ್ದು ಅವರೊಬ್ಬ ಮಹಾನ್ ಭಂಡ . ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದುದರಿಂದ ಅವರ ವಿರುದ್ಧದ ಕೇಸ್ ವಜಾ ಆಗಿದೆ. ಇಲ್ಲವಾದಲ್ಲಿ ಯಡಿಯೂರಪ್ಪ ಇಷ್ಟು ಹೊತ್ತಿಗೆ ಜೈಲಿನಲ್ಲೇ ಇರುತ್ತಿದ್ದರು ಎಂದು ಲೇವಡಿ ಮಾಡಿದರು.
ನನಗೆ ಆಣೆ ಪ್ರಮಾಣದಲ್ಲಿ ನಂಬಿಕೆ ಇಲ್ಲ. ನ್ಯಾಯಾಲಯದಲ್ಲಿ ನಂಬಿಕೆ ಇದೆ. ಅಲ್ಲಿ ಪ್ರಮಾಣ ಮಾಡಿಸಿಕೊಂಡು ವಾಪಾಸ್ ಕಳುಹಿಸುವುದಿಲ್ಲ ಸೂಕ್ತ ಸಾಕ್ಷಾಧಾರಗಳನ್ನು ಕೇಳುತ್ತಾರೆ ಎಂದರು.