“ಕಲಾಪಕ್ಕೆ ಮಾಧ್ಯಮ ನಿರ್ಬಂಧ ತೆರವುಗೊಳಿಸಿ’
Team Udayavani, Feb 25, 2020, 3:04 AM IST
ಬೆಂಗಳೂರು: ವಿಧಾನಸಭೆ ಕಲಾಪಗಳ ಚಿತ್ರೀಕರಣಕ್ಕೆ ಮಾಧ್ಯಮ ಕ್ಯಾಮೆರಾಗಳ ನಿರ್ಬಂಧ ಹಾಗೂ ಶಾಸಕರ ಭವನಕ್ಕೆ ಮಾಧ್ಯಮ ಪ್ರತಿನಿಧಿಗಳ ನಿರ್ಬಂಧ ಹೇರಿರುವುದನ್ನು ವಾಪಸ್ ಪಡೆಯುವಂತೆ ಮಾಜಿ ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭೆ ಕಲಾಪಗಳಿಗೆ ಮಾಧ್ಯಮಗಳನ್ನು ನಿಯಂತ್ರಿಸುವುದು ಸರಿಯಲ್ಲ. ನಾನು ಸ್ಪೀಕರ್ ಆಗಿದ್ದಾಗಲೂ ಎಡಿಟೆಡ್ ವಿಡಿಯೋ ಮಾತ್ರ ಕೊಡೋಣ ಎಂದಿದ್ದರು.
ಅದಕ್ಕೆ ನಾನು ಒಪ್ಪಲಿಲ್ಲ, ಜನರಿಗೆ ನಮ್ಮ ಸುದ್ದಿಗಳು ತಲುಪಬೇಕು ಎನ್ನುವುದು ಮುಖ್ಯ. ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಕ್ಷಗಳ ಶಾಸಕರನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಯಾರ ಒತ್ತಡಕ್ಕೆ ಮಣಿದಿದ್ದಾರೆ ಗೊತ್ತಿಲ್ಲ. ಶಾಸಕರ ಭವನಕ್ಕೂ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಸರಿಯಾದ ನಿರ್ಧಾರವಲ್ಲ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಇದುವರೆಗೂ ಸರ್ಕಾರದಿಂದ ನೀಡಬೇಕಾಗಿದ್ದ ವಾಹನ ವ್ಯವಸ್ಥೆ ಕಲ್ಪಿಸಿಲ್ಲ. ಪ್ರತಿಪಕ್ಷದ ನಾಯಕ ಶ್ಯಾಡೋ ಸಿಎಂ ಇದ್ದ ಹಾಗೆ ಎಂದು ಕೋಳಿವಾಡ ಹೇಳಿದರು. ಸ್ವಾಮೀಜಿಗಳು ಇತ್ತೀಚೆಗೆ ಧರ್ಮ ಪ್ರಚಾರ ಬಿಟ್ಟು ರಾಜಕೀಯ ಮಾಡಲು ಮುಂದಾಗಿದ್ದಾರೆ. ತಮ್ಮ ಸಮುದಾಯದ ನಾಯಕರಿಗೆ ಸ್ಥಾನಗಳನ್ನು ಕೊಡಬೇಕು ಎಂದು ಬ್ಲಾಕ್ವೆುಲ್ ಮಾಡಲು ಪ್ರಾರಂಭಿಸಿದ್ದಾರೆ ಎಂದರು.