ಇಂದಿನಿಂದ ರಾಜ್ಯದಲ್ಲಿ ಮೋಡ ಬಿತ್ತನೆ
Team Udayavani, Aug 21, 2017, 9:10 AM IST
ಬೆಂಗಳೂರು: ಸರ್ಕಾರದ ಬಹುಚರ್ಚಿತ ಮೋಡ ಬಿತ್ತನೆ ಕಾರ್ಯಕ್ರಮಕ್ಕೆ ಕೊನೆಗೂ ಕಾಲ ಕೂಡಿ ಬಂದಿದ್ದು, ಬೆಂಗಳೂರಿನ ಜಕ್ಕೂರು ವಿಮಾನ ನೆಲೆಯಿಂದ ಸೋಮವಾರ ಇದಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ. ಮೋಡ ಬಿತ್ತನೆಗೆ ಈಗಾಗಲೇ ಬೆಂಗಳೂರು, ಗದಗ ಹಾಗೂ ಸುರಪುರದಲ್ಲಿ ಅತ್ಯಾಧುನಿಕ ರೆಡಾರ್ ಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣ ಹಾಗೂ ಹುಬ್ಬಳ್ಳಿಯ ವಿಮಾನ ನಿಲ್ದಾಣಗಳನ್ನು ಬಳಸಿಕೊಂಡು 2 ವಿಶೇಷ ವಿಮಾನಗಳ ಮೂಲಕ ಮೋಡ ಬಿತ್ತನೆ ನಡೆಯಲಿದೆ. ಮೊದಲಿಗೆ ಸೋಮವಾರ (ಆ.21) ಬೆಂಗಳೂರಿನಲ್ಲಿ ಮೋಡ ಬಿತ್ತನೆ ಆರಂಭವಾಗುತ್ತಿದ್ದು, ನಂತರ ಗದಗ ಮತ್ತು ಸುರಪುರದಲ್ಲಿ ಇದಕ್ಕೆ ಚಾಲನೆ ಸಿಗಲಿದೆ.
ಜಕ್ಕೂರು ವಿಮಾನ ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಮೋಡ ಬಿತ್ತನೆ ಉದ್ಘಾಟಿಸಲಿದ್ದಾರೆ. ಕೃಷಿ ಸಚಿವ ಕೃಷ್ಣಭೈರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿಜ್ಞಾನ, ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಪರ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ಭಾಸ್ಕರ್, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಶ್ವರ್ ವ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ಸಿಂಗ್, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎನ್. ನಾಗಾಂಬಿಕಾದೇವಿ ಮೋಡ ಬಿತ್ತನೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಒಟ್ಟು 35 ಕೋಟಿ ರೂ.ವೆಚ್ಚದ ಈ ಮೋಡ ಬಿತ್ತನೆ ಕಾರ್ಯಕ್ರಮದ ಅನುಷ್ಠಾನವನ್ನು ಟೆಂಡರ್ ಮೂಲಕ ಬೆಂಗಳೂರು ಮೂಲದ ಮೆ. ಹೊಯ್ಸಳ ಪ್ರಾಜೆಕ್ಟ್(ಪ್ರೈ.) ಲಿಮಿಟೆಡ್ ಇವರಿಗೆ ವಹಿಸಲಾಗಿದೆ. ರಾಜ್ಯದಲ್ಲಿ ಮಳೆ ಪ್ರಮಾಣವನ್ನು ಅಳೆಯುವ ಮಾಪನಗಳನ್ನು ಕರ್ನಾಟಕ ರಾಜ್ಯದ ನೈಸರ್ಗಿಕ ವಿಕೋಪ ಮೇಲ್ವಿಚಾರಣ ಕೇಂದ್ರವು ಸ್ಥಾಪಿಸಿರುತ್ತದೆ. ಇದನ್ನು ಮೋಡ ಬಿತ್ತನೆ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುವುದು. ಮೋಡ ಬಿತ್ತನೆಯ ಮೌಲ್ಯಮಾಪನ ವರದಿ ಸಿದ್ದಪಡಿಸಲು ಸಹ ಇದು ನೆರವು ನೀಡಲಿದೆ.
ತಂಡ ರಚನೆ: ಪ್ರಸ್ತುತ ಮೋಡ ಬಿತ್ತನೆ ಕಾರ್ಯಾಚರಣೆಯನ್ನು ಅನುಷ್ಟಾನಗೊಳಿಸಲು ರಾಜ್ಯ ಮಟ್ಟದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ವಿಷಯ ತಜ್ಞರು ಮತ್ತು ಪರಿಣಿತ ವಿಜ್ಞಾನಿಗಳನ್ನು ಒಳಗೊಂಡ ಫಿಲ್ಡ್ ಅಬ್ಸರ್ವೇಷನ್ ಟೀಮ್, ರಡಾರ್ ಕ್ಯಾಲಿಬ್ರೇಷನ್ ಟೀಮ್, ಮಾನಿಟರಿಂಗ್ ಅಡ್ವೆ„ಸರಿ ಟೀಮ್, ವ್ಯಾಲೂವೇಷನ್ ಟೀಮ್ಗಳನ್ನು ರಚಿಸಲಾಗಿದೆ.
ಏನಿದು ಮೋಡ ಬಿತ್ತನೆ?
ಒಂದರಿಂದ ಹತ್ತು ಮೈಕ್ರಾನ್ ಗಾತ್ರದ ಮಳೆಹನಿಗಳನ್ನು ಕನಿಷ್ಠ 50 ಮೈಕ್ರಾನ್ ಗಾತ್ರಕ್ಕೆ ಹೆಚ್ಚಿಸುವ ಮೂಲಕ ಸಣ್ಣ-ಪುಟ್ಟ ಹನಿಗಳು ಗಾಳಿಯಿಂದ ಚಲಿಸಿ ಹೋಗದಂತೆ ತಡೆದು ಮಳೆಯ ಪ್ರಮಾಣವನ್ನು ಹೆಚ್ಚಿಸುವ ಮತ್ತು ಮೋಡಗಳಲ್ಲಿ ತೇವಾಂಶವಿದ್ದಾಗಲೂ ಮಳೆ ಬಾರದ ಸ್ಥಿತಿ ಉಂಟಾದಾಗ ತೇವಾಂಶವನ್ನು ಹನಿಯಾಗಿ ಪರಿವರ್ತನೆಗೊಳಿಸುವ ವೈಜ್ಞಾನಿಕವಾಗಿ ಪ್ರೇರೇಪಿಸುವ ತಂತ್ರಜ್ಞಾನವೇ ಮೋಡಬಿತ್ತನೆ. ಮೋಡಬಿತ್ತನೆ ಮಳೆಯ ಪ್ರಮಾಣವನ್ನು ಹೆಚ್ಚಿಸುವ ಒಂದು ವಿಧಾನ. ಮೋಡಗಳಲ್ಲಿ ತೇವಾಂಶವಿದ್ದಾಗಲೂ ಅತಿ ಸೂಕ್ಷ್ಮ ಕಣಗಳ ಅಭಾವವೇ ಮಳೆ ಬೀಳದಿರಲು ಕಾರಣವೆಂದು ಮೋಡ ಭೌತಶಾಸ್ತ್ರ ವ್ಯಾಖ್ಯಾನಿಸುತ್ತದೆ.
ರಾಜ್ಯದಲ್ಲಿ ಮುಂಗಾರು ಮಳೆ ವಿವರ
ಬೆಂಗಳೂರು: ಕೆಎಸ್ಎನ್ಡಿಎಂಸಿ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಜೂನ್ 1ರಿಂದ ಆಗಸ್ಟ್ 20ರವರೆಗೆ ಬಿದ್ದ ಮಳೆ ವಿವರ ಈ ಕೆಳಗಿನಂತಿದೆ: