ಏನ್ರಿ.ಡೈರಿ ನಿಮ್ಗೆ ತೋರ್ಸಿದ್ದಾರಾ? ಮಾಧ್ಯಮಗಳ ವಿರುದ್ದ ಸಿಎಂ ಕಿಡಿ
Team Udayavani, Feb 19, 2017, 4:11 PM IST
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕೆಂಡಾಮಂಡಲವಾದ ಘಟನೆ ಭಾನುವಾರ ನಡೆದಿದೆ.
ಸುದ್ದಿಗಾರರು ಹೈಕಮಾಂಡ್ಗೆ 1000 ಕೋಟಿ ನೀಡಿರುವ ಕುರಿತಾಗಿನ ಆರೋಪ ಮತ್ತು ಬಿಎಸ್ವೈ ಉಲ್ಲೇಖೀಸಿರುವ ಡೈರಿ ಬಗ್ಗೆ ಕೇಳಿದಾಗ ಕೆಂಡಾಮಂಡಲರಾದ ಸಿದ್ದರಾಮಯ್ಯ ..ಏನ್ರಿ..ನಿಮ್ಗೆ ಡೈರಿ ತೋರ್ಸಿದ್ದಾರಾ? ಎಲ್ಲಿದೆ ಡೈರಿ ..ಎನೂ ಇಲ್ಲ ಎಲ್ಲಾ ಸುಳ್ಳು ಆರೋಪ.ನಾನು ಯಡಿಯೂರಪ್ಪ 1 ಲಕ್ಷ ಕೋಟಿ ರೂಪಾಯಿ ಹೊಡೆದಿದ್ದಾನೆ ಅಂತ ಅರೋಪ ಮಾಡ್ತೇನೆ ಅದನ್ನು ನೀವು ಬರಿತೀರಾ ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಸುಳ್ಳು ಹೇಳುವುದು ರಕ್ತಗತವಾಗಿ ಬಿಟ್ಟಿದೆ . ಈ ಆರೋಪದಲ್ಲಿ ವಾಸ್ತವ ಏನೂ ಇಲ್ಲ ,ಸುಳ್ಳು ಆರೋಪವೇ ವಾಸ್ತವ ಎಂದರು.
ಇದೇ ವೇಳೆ ಯಡಿಯೂರಪ್ಪ ಅವರು ಸರ್ಕಾರದ ವಿರುದ್ದ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಾರಲ್ಲಾ ಎಂದು ಕೇಳಿದ್ದಕ್ಕೆ ಅವರೂ ಮಾಡಿದ್ರೆ ನಾವೂ ಮಾಡ್ತೇವೆ. ನಮ್ಮತ್ರ ಜನ ಇಲ್ವಾ ? ಅವರ ಹತ್ತು ಪಟ್ಟು ಜನ ನಮ್ಮ ಹತ್ರ ಇದೆ ಎಂದರು.
ರಾಜ್ಯಾದ್ಯಂತ ಪ್ರತಿಭಟನೆ
ಐಟಿ ದಾಳಿ ನಡೆದ ಬಳಿಕ ಕರ್ನಾಟಕದಲ್ಲಿ ಐಟಿ ದಾಳಿಗೊಳಗಾದ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ನಾಳೆ ಸೋಮವಾರ ರಾಜ್ಯಾದ್ಯಂತ ಯಡಿಯೂರಪ್ಪ ನೇತ್ರತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಬೆಂಗಳೂರಿನ ಟೌನ್ ಹಾಲ್ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ.
ಸಚಿವ ರಮೇಶ್ ಜಾರಕಿಹೋಳಿ, ಲಕ್ಷ್ಮಿ ಹೆಬ್ಟಾಳ್ಕರ್ ಮತ್ತು ಶಾಸಕ ಎಂಟಿಬಿ ನಾಗರಾಜ್ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮೀನ ಮೇಷ ಎಣಿಸುತ್ತಿದೆ ಎಂದು ಯಡಿಯೂರಪ್ಪ ಅವರು ಪ್ರತಿಭಟನೆಗೆ ಕರೆ ನೀಡಿದ್ದಾರೆ.