ಕೋವಿಡ್ ವಿರುದ್ಧ ಲಸಿಕೆಯೇ ಸುರಕ್ಷಾ ಕವಚ: ಸಿಎಂ ಯಡಿಯೂರಪ್ಪ
Team Udayavani, May 1, 2021, 12:01 PM IST
ಬೆಂಗಳೂರು: ಕೋವಿಡ್-19 ವಿರುದ್ಧ ಲಸಿಕೆಯೇ ನಮ್ಮ ಸುರಕ್ಷಾ ಕವಚವಾಗಿದೆ. ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಸೂಚನೆಗಳಂತೆ, ಆದ್ಯತೆಯ ಮೇರೆಗೆ ಲಸಿಕೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅರ್ಹರು ನೋಂದಣಿ ಮಾಡಿಸಿಕೊಂಡು, ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಿರಿ. ಸರ್ಕಾರದೊಂದಿಗೆ ಸಹಕರಿಸಿ, ಎಲ್ಲಾ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬೌರಿಂಗ್ ಆಸ್ಪತ್ರೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ತಿಂಗಳಲ್ಲಿ ಇನ್ನೊಂದು ಲಸಿಕೆ ಲಭ್ಯವಾಗಲಿದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದರಿಂದ ಎಲ್ಲರಿಗೂ ನೀಡಿದಂತಾಗಲಿದೆ ಎಂದರು.
ಇದನ್ನೂ ಓದಿ:ದೊಡ್ಡ ಪ್ರಮಾಣದ ಕೋವಿಡ್ ಲಸಿಕೆ ಲಭ್ಯ ಇಲ್ಲ; ಇಂದು ಸಾಂಕೇತಿಕ ಚಾಲನೆಯಷ್ಟೇ ಎಂದ ಸಚಿವ ಸುಧಾಕರ್
ನಮ್ಮಲ್ಲಿ ಒಟ್ಟು ನಾಲ್ಕು ಲಕ್ಷ ಲಸಿಕೆಯಿದೆ. ಇದನ್ನು 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವುದು. ಈಗ ಬಂದಿರುವ ಲಸಿಕೆಯನ್ನು ಈಗ ನೀಡಲಾಗುವುದು. ಮುಂದೆ ಹೊರ ದೇಶದಿಂದ ಲಸಿಕೆ ಬರುತ್ತಿದೆ. ಶೀಘ್ರವಾಗಿ ಎಲ್ಲವೂ ಸರಿಹೋಗಲಿದೆ. ಇನ್ನೆರಡು ದಿನದಲ್ಲಿ ಎಲ್ಲರ ಅನುಮಾನಕ್ಕೆ ತೆರೆ ಬೀಳಲಿದೆ. ಮೋದಿಯವರು ಸಹಕಾರ ನೀಡುತ್ತಿದ್ದಾರೆ.ಇಂದಿನಿಂದ ನಮ್ಮಲ್ಲಿ ಖಾಲಿಯಾಗೋವರೆಗೂ ಲಸಿಕೆ ನೀಡುತ್ತೇವೆ ಎಂದರು.
ಇಂದು ಸಂಜೆ ಆಸ್ಪತ್ರೆ ಪ್ರಮುಖರ ಜೊತೆ ಸಭೆ ಮಾಡಲಿದ್ದೇನೆ. ಬೆಡ್, ಆಕ್ಸಿಜನ್, ವೆಂಟಿಲೇಟರ್ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.