ಪುನೀತ್ ಪುಣ್ಯತಿಥಿಯಲ್ಲಿ ಸಿಎಂ ಭಾಗಿ
Team Udayavani, Nov 9, 2021, 4:39 AM IST
ಬೆಂಗಳೂರು: ಪುನೀತ್ ರಾಜ್ಕುಮಾರ್ ಅವರ ಪುಣ್ಯತಿಥಿ ಕಾರ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್.ಅಶೋಕ್, ಮುನಿರತ್ನ, ಬಿ.ಸಿ.ನಾಗೇಶ್ ಸಹಿತ ಹಲವು ಗಣ್ಯರು ಪಾಲ್ಗೊಂಡು ನಮನ ಸಲ್ಲಿಸಿದರು.
ಪುನೀತ್ ನಿವಾಸದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರಾಜಕೀಯ ರಂಗದ ಪ್ರಮುಖರು, ಚಲನಚಿತ್ರ ರಂಗದ ಕಲಾವಿದರು, ರಾಜ್ಕುಮಾರ್ ಕುಟುಂಬದ ಸದಸ್ಯರು, ಆಪ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾವೇರಿ ನದಿಯಲ್ಲಿ ತರ್ಪಣ ಬಿಟ್ಟ ವಿನೋದ್ರಾಜ್
ಶ್ರೀರಂಗಪಟ್ಟಣ: ಇಲ್ಲಿನ ಗಂಜಾಂನ ಬಳಿಯ ಕಾವೇರಿ ಸಂಗಮದಲ್ಲಿ ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ರಾಜ್ ಅವರು ಪುನೀತ್ಗೆ ತರ್ಪಣ ಬಿಟ್ಟು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಲೀಲಾವತಿ ಹಾಗೂ ಅವರ ಸಮೀಪದ ಬಂಧುಗಳು ಜತೆಯಲ್ಲಿದ್ದರು. ಆಶ್ಲೇಷಾ ಬಲಿ ಹಾಗೂ ನಾರಾಯಣ ಬಲಿ ಪೂಜೆ ನೆರವೇರಿಸಿ ಪುನೀತ್ ಆತ್ಮಕ್ಕೆ ಶಾಂತಿ ಕೋರಿದರು.
ಇದನ್ನೂ ಓದಿ:ನ.29ರಿಂದ ಡಿ.23ರವರೆಗೆ ಸಂಸತ್ನ ಚಳಿಗಾಲದ ಅಧಿವೇಶನ?
ಪುನೀತ್ ಹೆಸರಲ್ಲಿ ಶಾಲೆ, ಆಸ್ಪತ್ರೆ
ಪುನೀತ್ ರಾಜ್ಕುಮಾರ್ಗೆ ಬಳ್ಳಾರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಮಾಜಿ ಸಚಿವ ಜಿ.ಜನಾರ್ಧನ ರೆಡ್ಡಿ ಅವರು, ಪುನೀತ್ ಹೆಸರಲ್ಲಿ ಬಳ್ಳಾರಿಯಲ್ಲಿ ಬಡ ಮಕ್ಕಳಿಗಾಗಿ ಉಚಿತ ವಸತಿ ಶಾಲೆ ತೆರೆಯುವ, ಆಸ್ಪತ್ರೆ ಸ್ಥಾಪಿಸುವ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಅವರು ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಮೆಮೋರಿಯಲ್ ವಿಶ್ವಭಾರತಿ ಕಲಾನಿಕೇತನ ಬುದ್ಧಿಮಾಂದ್ಯ ಮಕ್ಕಳ ಶಾಲೆ ಆವರಣದಲ್ಲಿ ಸೋಮವಾರ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.
ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತನಾಡಿ, ಬಳ್ಳಾರಿಯ ಹೊಸ ಬಸ್ ನಿಲ್ದಾಣಕ್ಕೆ ಪುನೀತ್ ಅವರ ಹೆಸರನ್ನು ಇಡಲು ಸರ್ಕಾರದ ಜತೆಗೆ ಸಮಾಲೋಚನೆ ನಡೆಸಲಾಗುವುದು ಎಂದ ಅವರು, ತಂದೆಯವರ ಮಾತಿನಂತೆ ಕೆಎಂಎಫ್ ಜಾಹೀರಾತನ್ನು ಉಚಿತವಾಗಿ ಮಾಡಿಕೊಟ್ಟಿದ್ದರು ಎಂದು ಸ್ಮರಿಸಿದರು.