ಎಲ್ಲಾ ಸಮಯದಲ್ಲೂ ಮೋಸ ಮಾಡಲು ಸಾಧ್ಯವಿಲ್ಲ: ಕಾಂಗ್ರೆಸ್ ನಾಯಕರಿಗೆ ಸಿಎಂ ಬೊಮ್ಮಾಯಿ ತಿರುಗೇಟು
Team Udayavani, Jan 9, 2022, 12:30 PM IST
ಬೆಂಗಳೂರು: ನೀರಾವರಿ ಬಗ್ಗೆ ಕಾಂಗ್ರೆಸ್ ನವರು ಎಂದಿಗೂ ಕಾಳಜಿ ತೋರಿಸಿಲ್ಲ. ಕೃಷ್ಣೆಯ ಬಗ್ಗೆ ಪಾದಾಯಾತ್ರೆ ಮಾಡಿದ್ದರು, ಅದು ಏನಾಯ್ತು? ಪ್ರತಿ ವರ್ಷ 10 ಸಾವಿರ ಕೋಟಿ ಕೊಡುತ್ತೇವೆಂದು ಕೂಡಲಸಂಗದಲ್ಲಿ ಪ್ರಮಾಣ ಮಾಡಿದ್ದರು, ಅದು ಏನಾಯ್ತು? ಜನರು ಪದೇ ಪದೇ ಮರುಳಾಗುವುದಿಲ್ಲ, ಎಲ್ಲಾ ಸಮಯದಲ್ಲೂ ಮೋಸ ಮಾಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ನಾಯಕರನ್ನು ಟೀಕಿಸಿದರು
ಆರ್ ಟಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಯಾಕೆ ಮಾಡುತ್ತಿದ್ದಾರೆ ಎಂದು ಜನರಿಗೆ ಪ್ರಶ್ನೆ ಕಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಐದು ವರ್ಷ ಇತ್ತು, ಆಗ ಸರಿಯಾಗಿ ಡಿಪಿಆರ್ ಸಬ್ಮಿಟ್ ಮಾಡಲಿಲ್ಲ. ಸಮ್ಮಿಶ್ರ ಸರ್ಕಾರ ಬಂದಾಗ ಡಿಪಿಆರ್ ಸಲ್ಲಿಕೆಯಾಗಿರುವುದು. ಇದೆಲ್ಲ ಬಯಲಾಗಿದೆ. ಕಾಂಗ್ರೆಸ್ವರಿಗೆ ಬದ್ದತೆ ಇಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ:ಮೇಕೆದಾಟು ಪಾದಯಾತ್ರೆ ಆರಂಭ: ಪಾಂಚಜನ್ಯ ಮೊಳಗಿದೆ ಎಂದ ಡಿ.ಕೆ.ಶಿವಕುಮಾರ್
ಸಮ್ಮಿಶ್ರ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ನೀರಾವರಿ ಸಚಿವರು ಆಗಿದ್ದರು, ಆಗಲು ಏನೂ ಮಾಡಿಲ್ಲ. ಕಳೆದ ಎರಡು ವರ್ಷದಲ್ಲಿ ಇದರ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಈಗ ಚುನಾವಣೆ ಹತ್ತಿರ ಬಂದಿದೆಯೆಂದು ರಾಜಕೀಯ ಪಾದಾಯಾತ್ರೆ ಮಾಡುತ್ತಿದ್ದಾರೆ. ಕೆಲಸ ಮಾಡಿಲ್ಲ ಎಂಬ ಅಪರಾಧ ಮನೋಭಾವನೆ ಅವರನ್ನು ಕಾಡುತ್ತಿದೆ. ಅದಕ್ಕೆ ಜನರನ್ನು ಮರಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಕಾಂಗ್ರೆಸ್ ಪಾದಯಾತ್ರೆ ಎಂದು ಸಿಎಂ ಟೀಕೆ ಮಾಡಿದ್ದಾರೆ.