ದಸರಾ ಉದ್ಘಾಟನೆಗೆ ಎಸ್.ಎಂ.ಕೃಷ್ಣರಿಗೆ ಸಿಎಂ ಅಧಿಕೃತ ಆಹ್ವಾನ
Team Udayavani, Oct 2, 2021, 9:24 PM IST
ಬೆಂಗಳೂರು: ಈ ಸಾಲಿನ ದಸರಾ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ರಾಜ್ಯ ಸರಕಾರ ಹಾಗೂ ಮೈಸೂರು ಜಿಲ್ಲಾಡಳಿತದಿಂದ ಶನಿವಾರ ಅಧಿಕೃತ ಆಹ್ವಾನ ನೀಡಲಾಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತವಾಗಿ ಸಚಿವರು, ಸಂಸದರು ಹಾಗೂ ಮೈಸೂರಿನ ಮೇಯರ್ ಸದಾಶಿವ ನಗರದಲ್ಲಿರುವ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ, ಆಹ್ವಾನ ಪ್ರತಿಕೆ ನೀಡುವ ಮೂಲಕ ದಸರಾ ಉದ್ಘಾಟಿಸುವಂತೆ ಆಹ್ವಾನಿಸಿದರು.
ಅನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿರುವುದು ನನ್ನ ಬಾಳಿನ ಸುದೈವ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಾಡಿನ ಸರ್ವತೋಮುಖ ಅಭಿವೃದ್ಧಿಯಾಗಲಿ. ಈ ಅವಕಾಶಕ್ಕಾಗಿ ಸಿಎಂ ಹಾಗೂ ಅವರ ಸಂಪುಟದ ಸದಸ್ಯರಿಗೆ ಋಣಿಯಾಗಿರುವುದಾಗಿ ಹೇಳಿದರು.
ದಸರಾ ಉದ್ಘಾಟನೆಗೆ ಎಸ್.ಎಂ.ಕೃಷ್ಣ ಅವರದ್ದು ಸರ್ವಸಮ್ಮತ ಆಯ್ಕೆಯಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ:“ಮದುವೆಗಳ ಬದಲಿಗೆ ವಿಚ್ಛೇದನಗಳನ್ನು ಸಂಭ್ರಮಿಸಬೇಕು” : ರಾಮ್ ಗೋಪಾಲ್ ವರ್ಮಾ
ಎಸ್.ಎಂ.ಕೃಷ್ಣ ಅವರಿಗೆ ಮೈಸೂರು ಪೇಟಾ ತೊಡಿಸಿ, ಫಲಪುಷ್ಪ ತಾಂಬೂಲದೊಂದಿಗೆ, ಶಿವಾನಿ ಮರದಲ್ಲಿ ಕೈಯಿಂದ ಕೆತ್ತಲಾದ ಅಂಬಾರಿಯ ವಿಗ್ರಹದ ನೆನಪಿನ ಕಾಣಿಕೆ ನೀಡಿ ಗೌರವಿಸುವ ಮೂಲಕ ದಸರಾ ಉದ್ಘಾಟನೆಗೆ ಆಹ್ವಾನಿಸಲಾಯಿತು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕಂದಾಯ ಸಚಿವ ಆರ್.ಅಶೋಕ್, ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ, ಮೂಡಾ ಅಧ್ಯಕ್ಷ ಎಂ.ಸಿ.ರಾಜೀವ್, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಇದ್ದರು.