ಚಾಮುಂಡೇಶ್ವರಿಯಲ್ಲಿ ಪ್ರಚಾರಕ್ಕೆ ಧುಮುಕಿದ ಸಿಎಂ: ಹೂಮಳೆಯ ಸ್ವಾಗತ
Team Udayavani, Mar 29, 2018, 2:32 PM IST
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿರುವ ಅವರ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಗುರುವಾರದಿಂದ ಪ್ರಚಾರ ಕಾರ್ಯಕ್ಕೆ ಧುಮುಕಿದ್ದು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದ್ದಾರೆ.
ರಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೂವಿನ ಮಳೆಗರೆದು ಸ್ವಾಗತ ಕೋರಿದರು. ಭಾರೀ ಸಂಖ್ಯೆಯ ಸಾವಿರಾರು ಕಾರ್ಯಕರ್ತರು ಕಾಲ್ನಡಿಗೆಯ ಪ್ರಚಾರ ಮೆರವಣಿಗೆಯಲ್ಲಿ ಭಾಗಿಯಾದರು. ಕೆಲ ಅಭಿಮಾನಿಗಳು ಸಿದ್ದರಾಮಯ್ಯ ಅವರನ್ನು ಹೆಗಲ ಮೇಲೆ ಹೊತ್ತು ಸಾಗಿದರು. ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರೂ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು.
ಮೂರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಕೆಲ ಅಭಿಮಾನಿಗಳು ದೇವಾಲಯದಲ್ಲಿರುವ ಘಂಟೆ ಬಾರಿಸುವಂತೆ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು. ಕೊನೆಗೂ ಒತ್ತಾಯಕ್ಕೆ ಮಣಿದ ಸಿದ್ದರಾಮಯ್ಯ ಅವರು ಘಂಟೆ ಬಾರಿಸಿದರು. ಈ ವೇಳೆ ಕಾಲು ಜಾರಿ ಮುಗ್ಗರಿಸಿದರು. ಕೂಡಲೇ ಅವರನ್ನು ಅಭಿಮಾನಿಗಳು ಹಿಡಿದರು.
ಸಿದ್ದರಾಮಯ್ಯ ಅವರು ಗುರುವಾರದಿಂದ 5 ದಿನಗಳ ಕಾಲ ಮೈಸೂರು ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಿ, ಕಾರ್ಯಕರ್ತರ ಜೊತೆ ಸರಣಿ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ.
ನಾನು ಎಷ್ಟು ಭಾರಿ ಸ್ಪರ್ಧಿಸಿದ್ದೇನೆ ಗೊತ್ತಾ?
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ ಸಿಎಂ ಸಿದ್ದರಾಮಯ್ಯ ‘ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಷ್ಟು ಬಾರಿ ಸ್ಪರ್ಧಿಸಿದ್ದೇನೆ ಎನ್ನುವುದು ಕುಮಾರಸ್ವಾಮಿಗೆ ಗೊತ್ತಿದೆಯಾ ? ನಾನು 7 ಬಾರಿ ಸ್ಪರ್ಧಿಸಿ 5 ಬಾರಿ ಗೆದ್ದಿದ್ದೇನೆ. ಈ ಬಾರಿ ನನಗೆ ಕ್ಷೇತ್ರದ ಮೇಲೆ ವಿಶ್ವಾಸವಿದ್ದು ಗೆಲುವು ಸಾಧಿಸುತ್ತೇನೆ’ ಎಂದರು.
ಹೋದಲ್ಲೆಲ್ಲಾ ಶಾ ಹಿಂಬಾಲಿಸುತ್ತಿದ್ದಾರೆ !
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಕಿಡಿ ಕಾರಿ ‘ನಾನು ಹೋದಲ್ಲೆಲ್ಲಾ ಶಾ ಹಿಂಬಾಲಿಸುತ್ತಿದ್ದಾರೆ. ಜೈಲಿಗೆ ಹೋದವರು ನನಗೆ ಪಾಠ ಮಾಡುವ ಅಗತ್ಯ ಇಲ್ಲ’ ಎಂದರು.