ಕಾಂಗ್ರೆಸ್ ಕಮಿಷನ್ ಏಜೆಂಟರ ಅಸೋಸಿಯೇಶನ್: ಈಶ್ವರಪ್ಪ
Team Udayavani, Jun 27, 2019, 3:02 AM IST
ಶಿವಮೊಗ್ಗ: ಕಾಂಗ್ರೆಸ್, ಕಮಿಷನ್ ಏಜೆಂಟರ ಅಸೋಸಿಯೇಶನ್ ಇದ್ದ ಹಾಗೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರಕಾರದ ಸಮನ್ವಯ ಸಮಿತಿ ಇಲ್ಲದ ಹಾಗೆ ಆಗಿದ್ದು, ಕಾಂಗ್ರೆಸ್ನಲ್ಲಿ ಏನಿದ್ದರೂ ಸಿದ್ದರಾಮಯ್ಯನವರದ್ದೇ ದಾದಾಗಿರಿಯಾಗಿದೆ. ಕಾಂಗ್ರೆಸ್ ಕಮಿಷನ್ ಏಜೆಂಟರ ಅಸೋಸಿಯೇಶನ್ ಇದ್ದ ಹಾಗಿದೆ.
ಇವರದೇ ಸರಕಾರದಲ್ಲಿರುವ ಅನೇಕ ಶಾಸಕರು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಮುಂದುವರಿಯಬಾರದು ಎಂದು ಹೇಳುತ್ತಿದ್ದಾರೆ. ಅದೇ ರೀತಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್ ಬಗ್ಗೆ ಕೂಡ ಮಾತನಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಯಾರು ಎಂದು ಹಲವು ಮುಖಂಡರು ಪಟ್ಟಿ ನೀಡಿದ್ದಾರೆ. ಅವರಿಗೆ ನೋಟಿಸ್ ಜಾರಿ ಮಾಡಿದ್ದಾರಾ? ಅಥವಾ ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರಾ? ರೋಷನ್ ಬೇಗ್ರನ್ನು ಅಮಾನತು ಮಾಡಿರುವುದೇ ದೊಡ್ಡದಾ? ರೋಷನ್ ಬೇಗ್ ಸಸ್ಪೆಂಡ್ ಮಾಡಿದಾಕ್ಷಣ ದಿನೇಶ್ ಗೂಂಡೂರಾವ್ ಪೇಪರ್ ಟೈಗರ್ ಅಲ್ಲಾ ಅನ್ನೋಕಾಗೊತ್ತಾ ಎಂದು ಪ್ರಶ್ನೆ ಮಾಡಿದರು.