ಐಟಿ ದಾಳಿ ಎಫೆಕ್ಟ್; ಗುಜರಾತ್ ಗೆ ವಾಪಸ್ ತೆರಳಲು ಕೈ ಶಾಸಕರ ಪಟ್ಟು
Team Udayavani, Aug 3, 2017, 11:51 AM IST
ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಡಿಕೆ ಶಿವಕುಮಾರ್ ಹಾಗೂ ಆಪ್ತರ ಮನೆ, ಕಚೇರಿ ಸೇರಿದಂತೆ 60 ಕಡೆ ಐಟಿ ದಾಳಿ ನಡೆದ ಬೆನ್ನಲ್ಲೇ ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಠಿಕಾಣಿ ಹೂಡಿರುವ ಗುಜರಾತ್ ಶಾಸಕರು ವಾಪಸ್ ಹೋಗಲು ಪಟ್ಟು ಹಿಡಿದಿದ್ದಾರೆ ಎಂದು ಖಾಸಗಿ ಟಿವಿ ಚಾನೆಲ್ ಗಳ ವರದಿ ತಿಳಿಸಿದೆ.
ನಮ್ಮ ಮನೆ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಬಹುದೆಂದು ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕರು, ತಾವೂ ಕೂಡಲೇ ಗುಜರಾತ್ ಗೆ ತೆರಳುವುದಾಗಿ ಪಟ್ಟು ಹಿಡಿದಿದ್ದಾರೆನ್ನಲಾಗಿದೆ.
ಆಗಸ್ಟ್ 8ರಂದು ರಾಜ್ಯಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷದ 6 ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದರಿಂದಾಗಿ ಸತತವಾಗಿ ಗುಜರಾತ್ ನಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದ ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಗೆಲುವಿಗೆ ಸಂಕಷ್ಟ ಒದಗುವ ಸಂದರ್ಭ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಶಾಸಕರ ಖರೀದಿ ತಪ್ಪಿಸಲು ಗುಜರಾತ್ ನ 44 ಕಾಂಗ್ರೆಸ್ ಶಾಸಕರು ಬೆಂಗಳುರಿಗೆ ಆಗಮಿಸಿ ರೆಸಾರ್ಟ್ ನಲ್ಲಿ ಆಶ್ರಯ ಪಡೆದಿದ್ದರು. ಅಲ್ಲದೇ ಗುಜರಾತ್ ಶಾಸಕರ ಊಟೋಪಚಾರ, ಆಶ್ರಯದ ಹೊಣೆಗಾರಿಕೆಯನ್ನು ಸಚಿವ ಡಿಕೆಶಿ ಹೊತ್ತಿದ್ದರು.