ಮನೆ ಮನೆಗೆ ಕಾಂಗ್ರೆಸ್ 15 ದಿನ ವಿಸ್ತರಣೆ
Team Udayavani, Oct 7, 2017, 10:13 AM IST
ಬೆಂಗಳೂರು: ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ಯೋಜನೆ ಮನೆ ಮನೆಗೆ ಕಾಂಗ್ರೆಸ್ ಯೋಜನೆಯನ್ನು ಹದಿನೈದು ದಿನ ವಿಸ್ತರಿಸಲಾಗಿದೆ. ಅ.15ಕ್ಕೆ ಮುಕ್ತಾಯಗೊಳಿಸಲು ನಿರ್ಧರಿಸಿದ ಕಾರ್ಯಕ್ರಮವನ್ನು ಅಕ್ಟೋಬರ್ ಅಂತ್ಯದವರೆಗೂ ವಿಸ್ತರಿಸಲಾಗಿದೆ.
ಶುಕ್ರವಾರ ಪಕ್ಷದ ಕಚೇರಿಯಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿದ ಕೆ.ಸಿ. ವೇಣುಗೋಪಾಲ ಮನೆ ಮನೆಗೆ
ಕಾಂಗ್ರೆಸ್ ಯೋಜನೆಯ ನಿಧಾನಗತಿಗೆ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ. ಕೆಪಿಸಿಸಿ ಪದಾಧಿಕಾರಿಗಳು ಯೋಜನೆಯ ಉಸ್ತುವಾರಿಯನ್ನು ಸರಿಯಾಗಿ ನಿಭಾಯಿಸಬೇಕು. ಶಾಸಕರು ಸರಿಯಾಗಿ
ಸ್ಪಂದಿಸದಿದ್ದರೆ ಅವರ ವಿರುದ್ಧ ನೇರವಾಗಿ ತನಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡುವಂತೆ ಸೂಚಿಸಿದ್ದಾರೆ
ಎಂದು ತಿಳಿದು ಬಂದಿದೆ.
ಬೂತ್ ಮಟ್ಟದ ಸಮಿತಿ ರಚನೆಗೆ ಪಕ್ಷದಲ್ಲಿ ರಾಷ್ಟ್ರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಐಸಿಸಿ ಉಪಾಧ್ಯಕ್ಷ
ರಾಹುಲ್ ಗಾಂಧಿ ಆಸಕ್ತಿವಹಿಸಿ ಸಮಿತಿ ರಚನೆ ಮಾಡಿರುವುದರಿಂದ ಸಮಿತಿ ಸದಸ್ಯರಿಗೆ ಪಕ್ಷ ಅಧಿಕಾರಕ್ಕೆ ಬಂದಾಗ ಸೂಕ್ತ ಅವಕಾಶ ಕಲ್ಪಿಸುತ್ತಾರೆ. ಬೂತ್ ಸಮಿತಿಗಳ ಮೇಲುಸ್ತುವಾರಿಗೆ ಕೇಂದ್ರದ ಮಾಜಿ ಹಣಕಾಸು ಸಚಿವ ಚಿದಂಬರಂ ಅವರನ್ನು ನೇಮಿಸಲಾಗಿದ್ದು, ಅವರು ಶೀಘ್ರವೇ ಬೂತ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.