ಕಾಂಗ್ರೆಸ್ನವರೇ ನನ್ನನ್ನು ಹೊರ ಹಾಕುತ್ತಿದ್ದಾರೆ: ಜಾಧವ್
Team Udayavani, Jan 25, 2019, 1:35 AM IST
ಚಿಂಚೋಳಿ: ಹಲವು ದಿನಗಳಿಂದ ಮುಂಬೈನಲ್ಲಿ ವಾಸ್ತವ್ಯ ಹೂಡಿ ‘ಆಪರೇಷನ್ ಕಮಲ’ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ಚಿಂಚೋಳಿ ಕ್ಷೇತ್ರದ ಶಾಸಕ ಡಾ.ಉಮೇಶ ಜಾಧವ ಗುರುವಾರ ಸ್ವಗ್ರಾಮ ಬೆಡಸೂರ ತಾಂಡಾಕ್ಕೆ ಆಗಮಿಸಿದರು. ತಮ್ಮ ತಂದೆ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಗೋಪಾಲದೇವ ಜಾಧವ್ ಅವರ 36ನೇ ಪುಣ್ಯಸ್ಮರಣೆ, ಡಾ.ಶಿವಕುಮಾರ ಸ್ವಾಮೀಜಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷ ತ್ಯಜಿಸುವ ಮತ್ತು ಬಿಜೆಪಿಗೆ ಸೇರುವ ಕುರಿತು ನಾನು ಸ್ವಂತ ನಿರ್ಣಯ ಕೈಗೊಳ್ಳುವುದಿಲ್ಲ. ಪಕ್ಷದ ಕಾರ್ಯಕರ್ತರ ನಿರ್ಧಾರವೇ ನನ್ನ ಅಂತಿಮ ನಿರ್ಧಾರವಾಗಿದೆ. ಚಿಂಚೋಳಿ ಶಾಸಕರಿಗೆ ಸಚಿವ ಸ್ಥಾನ ಸಿಗಬೇಕಿತ್ತು ಎನ್ನುವುದು ಜನರ ನಿರೀಕ್ಷೆ ಆಗಿತ್ತೇ ವಿನ: ನನ್ನ ನಿರೀಕ್ಷೆ ಆಗಿರಲಿಲ್ಲ. ಕೆಲವರು ಉದ್ದೇಶ ಪೂರ್ವಕ ವಾಗಿಯೇ ಕಾಂಗ್ರೆಸ್ ಪಕ್ಷವನ್ನು ಬಿಡುವಂತಹ ವಾತಾವರಣ ನಿರ್ಮಾಣ ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಓಡಿಸುವ ಪ್ರಯತ್ನ ನಡೆದಿದೆ. ನಾನು ಹೋದರೆ ಹೋಗಲಿ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಇಬ್ಭಾಗವಾಗಿದೆ. ನಾನು 50 ಕೋಟಿ ರೂ.ಗೆ ಮಾರಾಟ ಆಗಿದ್ದೇನೆ ಎಂದು ನನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಿದ್ದಾರೆ. ನಾನು ಯಾರಿಗೂ ಅಂಜುವುದಿಲ್ಲ, ನನ್ನ ಆತ್ಮಕ್ಕೆ ಅಂಜುತ್ತೇನೆ. ಕಾರ್ಯಕರ್ತರೇ ನನ್ನ ದೇವರು. ನನಗೆ ಅವರ ನಿರ್ಧಾರವೇ ಮುಖ್ಯ ಎಂದು ಹೇಳಿದರು. ಈ ಮಧ್ಯೆ, ಮುನಿಸಿಕೊಂಡಿರುವ ಡಾ.ಉಮೇಶ ಜಾಧವ್ ಅವರ ಮನವೊಲಿಕೆಗೆ ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್, ಜಾಧವ್ ಅವರ ಸೋದರಳಿಯ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೊಡ ಅವರನ್ನು ಸಂಧಾನಕ್ಕೆ ಕಳುಹಿಸಿದೆ.