ಕಾಂಗ್ರೆಸ್ ನವರು ಈಗಾಗಲೇ ಅಧಿಕಾರಕ್ಕೆ ಬಂದೆವೆಂಬ ಭ್ರಮೆಯಲ್ಲಿದ್ದಾರೆ: ಯಡಿಯೂರಪ್ಪ
Team Udayavani, Aug 15, 2022, 2:42 PM IST
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನವರು ಈಗಾಗಲೇ ಅಧಿಕಾರಕ್ಕೆ ಬಂದೆವೆಂಬ ಭ್ರಮೆಯಲ್ಲಿದ್ದಾರೆ. ನಾಡಿನಲ್ಲಿ ಮತ್ತೆ ಪ್ರವಾಸ ಮಾಡಿ, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ. ನಾವು ಮಾಡಿದ ಅಭಿವೃದ್ಧಿ ಕಾರ್ಯ ಇಟ್ಟುಕೊಂಡು ಓಡಾಟ ಮಾಡಿದರೆ ಕಾಂಗ್ರೆಸ್ ಗೆ ಉಸಿರುಗಟ್ಟುವ ವಾತಾವರಣ ಬರಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸ್ವಾತಂತ್ರ್ಯ ಗಳಿಸಿಕೊಟ್ಟ ಮಹಾತ್ಮ ಗಾಂಧಿಯವರನ್ನು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನ ಸ್ಮರಿಸಿಕೊಳ್ಳುವ ದಿನ. ಅಂಬೇಡ್ಕರ್ ಅವರಿಗೆ ಈ ಕಾಂಗ್ರೆಸ್ ಎಷ್ಟು ಕಿರುಕುಳ ಕೊಟ್ಟಿದೆ. ಈ ಬಗ್ಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಗೆ ತಿಳಿಸುತ್ತೇನೆ ಎಂದರು.
ದೇಶ ವಿಭಜನೆ, ಭಯೋತ್ಪಾದನೆ, ಇತರೆ ಎಲ್ಲವನ್ನೂ ಈ ದೇಶ ಎದುರಿಸಿ ನಿಂತಿದೆ. ಎಲ್ಲವನ್ನೂ ಎದುರಿಸಿ ನಿಲ್ಲೋ ಧೈರ್ಯ ಪ್ರಧಾನಿ ನರೇಂದ್ರ ಮೋದಿಗಿದೆ. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಪಡೆದ ನಾವೇ ಪುಣ್ಯವಂತರು. ಹಗಲು, ಇರುಳೆನ್ನದೆ ಕೆಲಸ ಮಾಡುತ್ತಿದ್ದಾರೆ. ಅಂತಹ ಕೆಲಸವನ್ನು ರಾಜ್ಯದಲ್ಲಿ ಮಾಡಿದರೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ವಿಶ್ವದ ಅನೇಕ ದೇಶಗಳು ಆರ್ಥಿಕ ಪರಿಸ್ಥಿತಿಯಲ್ಲಿ ಕುಸಿದಿದ್ರೆ. ಭಾರತ ಮಾತ್ರ 6.5ರಷ್ಟು ಆರ್ಥಿಕ ಪರಿಸ್ಥಿತಿ ಚೇತರಿಕೆ ಕಂಡಿದೆ. ಈ ಮೂಲಕ ಭಾರತ ಯಾರಿಗೂ ಹೆದರುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ ಎಂದು ಬಿ.ಎಸ್ ವೈ ಹೇಳಿದರು.