ಎಂಟಿಬಿ, ಆನಂದ್ ಸಿಂಗ್ ವಿರುದ್ಧ ಕಾಂಗ್ರೆಸ್ ದೂರು
Team Udayavani, Nov 27, 2019, 3:04 AM IST
ಬೆಂಗಳೂರು: ಮತದಾರರಿಗೆ ದುಬಾರಿ ಉಡುಗೊರೆ ನೀಡಿ ಆಮಿಷವೊಡ್ಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂ ಸಿದ್ದಾರೆಂದು ಆರೋಪಿಸಿ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹಾಗೂ ವಿಜಯನಗರ (ಹೊಸಪೇಟೆ) ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ವಿರುದ್ಧ ಕಾಂಗ್ರೆಸ್, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಠೊಡ್ ನೇತೃತ್ವದ ಕಾಂಗ್ರೆಸ್ ನಿಯೋಗ ಮಂಗಳವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ.
ಎಂಟಿಬಿ ನಾಗರಾಜ್ ಅವರು ಮತದಾರರಿಗೆ ಚಿನ್ನದ ಉಂಗುರ ಉಡುಗೊರೆ ನೀಡಿ ಆಮಿಷವೊಡ್ಡುತ್ತಿದ್ದಾರೆ. ಅದೇ ರೀತಿ ಆನಂದ್ ಸಿಂಗ್ ತಮ್ಮ ಮಗನ ಮದುವೆಗೆ 50 ಸಾವಿರ ಜನರಿಗೆ ಆಮಂತ್ರಣ ನೀಡಿದ್ದಾರೆ. ಮದುವೆ ನೆಪದಲ್ಲಿ ಜನರನ್ನು ಸೇರಿಸಿ ಉಡುಗೊರೆ ನೀಡಲಾಗುತ್ತಿದೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಇಬ್ಬರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.