ಕೈ ಶಾಸಕರು ಮಿತಿಮೀರುತ್ತಿದ್ದಾರೆ..ನಾ ರಾಜೀನಾಮೆ ನೀಡಲು ಸಿದ್ಧ; CM
Team Udayavani, Jan 28, 2019, 7:11 AM IST
ಬೆಂಗಳೂರು: ಬಹಿರಂಗ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಾನು ಕುರ್ಚಿಗೆ ಅಂಟಿಕೊಂಡಿಲ್ಲ, ಈಗಲೇ ರಾಜೀನಾಮೆ ನೀಡಲು ಸಿದ್ಧ ಎಂದು ಮೈತ್ರಿಪಕ್ಷಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಸಿದ್ದರಾಮಯ್ಯನವರೇ ನಮ್ಮ ನಾಯಕರು ಎಂಬ ಕಾಂಗ್ರೆಸ್ ಶಾಸಕರ ಹೇಳಿಕೆ ಕುರಿತಂತೆ ಸೋಮವಾರ ಸುದ್ದಿಗಾರರು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದಾಗ, ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಪಾಲನೆ ಮಾಡುತ್ತಿಲ್ಲ, ಪದೇ, ಪದೇ, ಕಾಂಗ್ರೆಸ್ ನಾಯಕರು ಮಿತಿಮೀರಿ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಈ ಬಗ್ಗೆ ಕಾಂಗ್ರೆಸ್ ನಾಯಕರು, ಹೈಕಮಾಂಡ್ ಉತ್ತರ ಕೊಡಬೇಕು. ನಾನು ಅದಕ್ಕೆ ಉತ್ತರ ಕೊಡಲು ಸಮರ್ಪಕ ವ್ಯಕ್ತಿಯಲ್ಲ. ಆದರೆ ಪದೇ,ಪದೇ ಕಾಂಗ್ರೆಸ್ ಶಾಸಕರು ಹೀಗೆ ಹೇಳಿಕೊಂಡು ತಿರುಗುತ್ತಿದ್ದಾರೆ. ನಾನು ಸಿಎಂ ಕುರ್ಚಿಯಿಂದ ಕೆಳಗಿಳಿಯಬೇಕಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.