ವಿಧ್ವಂಸಕ ಕೃತ್ಯಗಳ ಸಂಚು; ಎನ್ಐಎ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗ
Team Udayavani, Aug 21, 2020, 6:30 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ಸ್ನ (ಐಸಿಸ್) ಉಗ್ರರಿಗೆ ವೈದ್ಯಕೀಯ ಸೇವೆ ಹಾಗೂ ಶಸ್ತ್ರಾಸ್ತ್ರ ಪೂರೈಕೆ ಕಲ್ಪಿಸಲು ಗೌಪ್ಯವಾಗಿ ಸಂಪರ್ಕಿಸಲು ಪ್ರತ್ಯೇಕ ಆ್ಯಪ್ಗ್ಳನ್ನು ಅಭಿವೃದ್ಧಿಪಡಿಸುತ್ತಿದ್ದ ಡಾ| ಅಬ್ದುಲ್ ರೆಹಮಾನ್ ತನ್ನ ಸಂಘಟನೆ ಜತೆ ಸೇರಿ ಬೆಂಗಳೂರು ಸೇರಿ ವಿಶ್ವಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಎಂಬ ಸ್ಫೋಟಕ ಸಂಗತಿ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ಭಾರತದ ಟೆಲಿಗ್ರಾಂ ಮತ್ತು ವಿದೇಶದ ತ್ರೀಮಾ ಆ್ಯಪ್ ಮೂಲಕ ಮಾತ್ರ ಸಿರಿಯಾದ ಉಗ್ರರನ್ನು ಸಂಪರ್ಕಿಸುತ್ತಿದ್ದ ವೈದ್ಯ, ಬೆಂಗಳೂರು ಸೇರಿ ದಕ್ಷಿಣ ಭಾರತದ ಕೆಲವೆಡೆ ಸ್ಫೋಟ ನಡೆಸಲು ಸಂಚು ರೂಪಿಸಿದ್ದ. ಮುಖ್ಯವಾಗಿ ಆ. 5ರಂದು ನಡೆದ ಅಯೋಧ್ಯೆ ಕಾರ್ಯಕ್ರಮದ ಮೊದಲು ಅಥವಾ ಅನಂತರ ಕೃತ್ಯ ನಡೆಸಲು ಚಿಂತಿಸಿದ್ದ. ಆದರೆ, ದೇಶದೆಲ್ಲೆಡೆ ಬಿಗಿ ಭದ್ರತೆಯಿದ್ದ ಕಾರಣ ಸಾಧ್ಯವಾಗಿಲ್ಲ. ಮತ್ತೂಂದೆಡೆ ಅಮೆರಿಕದಿಂದ ಬಂದ ಎಚ್ಚರಿಕೆ ಸಂದೇಶದಿಂದ ದೇಶದ ಎಲ್ಲ ರಾಜ್ಯಗಳ ಗುಪ್ತಚರ ಸಂಸ್ಥೆಗಳು ಅಲರ್ಟ್ ಆಗಿದ್ದವು. ಹೀಗಾಗಿ ಯಾವುದೇ ವಿಧ್ವಂಸಕ ಕೃತ್ಯ ಸಾಧ್ಯವಾಗಿಲ್ಲ.
ಪೂರಕ ಸಾಕ್ಷ್ಯ ಲಭ್ಯ
ಕೃತ್ಯಕ್ಕೆ ಪೂರಕವಾಗಿ ಆತನ ಲ್ಯಾಪ್ಟಾಪ್ ಮತ್ತು ಮೊಬೈಲ್ನಲ್ಲಿ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ. ಜತೆಗೆ ಆತನೇ ಅಭಿವೃದ್ಧಿಪಡಿಸಿದ್ದ ಎರಡು ಆ್ಯಪ್ಗ್ಳಲ್ಲಿಯೂ ಕೆಲವು ಮಾಹಿತಿ ಪತ್ತೆಯಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಕಾಶ್ಮೀರ ದಂಪತಿ ಜತೆ ಸಂಪರ್ಕ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ಎಸಗಲು ಐಸಿಸ್ ಸೋದರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ (ಐಎಸ್ಕೆಪಿ) ಸಂಚು ರೂಪಿಸಿತ್ತು. ಈ ಮಧ್ಯೆ ಕೆಲವು ತಿಂಗಳ ಹಿಂದೆ ನಡೆದ ಎನ್ಐಎ ಕಾರ್ಯಾಚರಣೆಯಲ್ಲಿ ಕಾಶ್ಮೀರ ಮೂಲದ ಜಹಾನ್ಝೈಬ್ ಸಾಮಿ ವಾನಿ ಹಾಗೂ ಆತನ ಪತ್ನಿ ಹೀನಾ ಬಶೀರ್ ಬೇಗ್ರನ್ನು ದಿಲ್ಲಿಯಲ್ಲಿ ಬಂಧಿಸಲಾಗಿತ್ತು. ಈ ದಂಪತಿಗೆ ತಿಹಾರ್ ಜೈಲಿನಲ್ಲಿರುವ ಮತ್ತೂಬ್ಬ ಐಸಿಸ್ ಮುಖಂಡ ಅಬ್ದುಲ್ ಬಶೀತ್ ಜತೆ ಸಂಪರ್ಕ ಬೆಳಕಿಗೆ ಬಂದಿತ್ತು. ಬಳಿಕ ಕಾಶ್ಮೀರದ ದಂಪತಿ ಸಂಪರ್ಕ ಜಾಲವನ್ನು ಮತ್ತಷ್ಟು ಶೋಧಿಸಿದಾಗ ಪುಣೆ ಹಾಗೂ ಬೆಂಗಳೂರಿನಲ್ಲಿ ಅವರ ಜಾಲ ಹರಡಿರುವುದು ಗೊತ್ತಾಗಿ ವೈದ್ಯನನ್ನು ಬಂಧಿಸಲಾಗಿದೆ.
ಸಿರಿಯಾಕ್ಕೂ ಹೋಗಿದ್ದ
ಮುಸ್ಲಿಂ ಮೂಲಭೂತವಾದದಿಂದ ಪ್ರಭಾವಿತನಾಗಿದ್ದ ವೈದ್ಯನಿಗೆ ಐಸಿಎಸ್ ಮೇಲೆ ವಿಪರೀತ ಒಲವು ಬೆಳೆಯಿತು. ಎಂಬಿಬಿಎಸ್ ಮುಗಿಸಿದ ಬಳಿಕ 2014ರಲ್ಲಿ ಐಸಿಸ್ ತವರೂರು ಸಿರಿಯಾಕ್ಕೆ ಹೋಗಿ ಅಲ್ಲಿನ ವೈದ್ಯಕೀಯ ಶಿಬಿರಗಳಲ್ಲಿ ಭಾಗವಹಿಸಿ ಗಾಯಾಳು ಉಗ್ರರಿಗೆ ಚಿಕಿತ್ಸೆ ನೀಡಿದ್ದ ಎಂದುಎನ್ಐಎ ಮೂಲಗಳು ತಿಳಿಸಿವೆ.
ಇನ್ನೊಂದು ಮೂಲದ ಪ್ರಕಾರ, ಆರೋಪಿಯು 22 ವರ್ಷ ವಯಸ್ಸಿನಲ್ಲೇ, ಅಂದರೆ ವಿದ್ಯಾರ್ಥಿ ಯಾಗಿದ್ದಾಗಲೇ ಸಿರಿಯಾ ದೇಶದ ಕ್ಯಾಂಪ್ನಲ್ಲಿ ಭಾಗವಹಿಸಿದ್ದ. ಎನ್ಐಎ ತಂಡ ಆತನ ಚಲನವಲನದ ಬಗ್ಗೆ ಕಳೆದ ಎರಡು ವರ್ಷಗಳಿಂದ ಕಣ್ಣಿಟ್ಟಿತ್ತು. ಇತ್ತೀಚೆಗೆ ಆತ ನೇರವಾಗಿ ಭಯೋತ್ಪಾದನ ಸಂಚು ಚಟುವಟಿಕೆಗಳಲ್ಲಿ ಭಾಗಿಯಾಗಿ ರುವುದು ತಿಳಿದು ಬಂದ ಬಳಿಕ ಆತನನ್ನು ಬಂಧಿಸಲಾಯಿತು. ಆತನ ಜತೆ ಇನ್ನೂ ನಾಲ್ಕು ಮಂದಿ ಸಿರಿಯಾ ಕ್ಯಾಂಪಿಗೆ ತೆರಳಿದ್ದು, ಅವರ ಚಲನವಲನದ ಬಗ್ಗೆಯೂ ನಿಗಾ ವಹಿಸಲಾಗಿದೆ
ಕೋಡ್ ವರ್ಡ್ನಲ್ಲಿ ಸಂವಹನ
ವೈದ್ಯ ರೆಹಮಾನ್ ಕೋಡ್ ವರ್ಡ್ಗಳ ಮೂಲಕ ಸಂವಹನ ನಡೆಸುತ್ತಿದ್ದ. “ದಿ ಬ್ರೇವ್’ ಹಾಗೂ “ದಿ ಬ್ರೇವ್ ಬಸವನಗುಡಿ’ ಎಂಬ ಕೋಡ್ ವರ್ಡ್ ಇಟ್ಟುಕೊಂಡಿದ್ದ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ “ದಿ ಬ್ರೇವ್ ಗುಪ್ತಾ’ ಎಂದು ಹೇಳಿಕೊಂಡಿದ್ದ. ಮತ್ತೂಂದು ಸ್ಫೋಟಕ ವಿಚಾರವೆಂದರೆ ಈತ ಅಭಿವೃದ್ಧಿಪಡಿಸಿದ್ದ ಆ್ಯಪ್ಗ್ಳಲ್ಲಿ ಸ್ಯಾಟಲೈಟ್ ಕರೆಗಳನ್ನು ಮೊಬೈಲ್ನಲ್ಲಿ ಸ್ವೀಕರಿಸುವ ತಂತ್ರಾಂಶ ಸಿದ್ಧಪಡಿಸಿದ್ದ. ಅದರೆ ಪ್ರಯೋಗ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ