ಜೆಎನ್ಯು ಕನ್ನಡ ಅಧ್ಯಯನ ಪೀಠ ಮುಂದುವರಿಕೆ: ಸಿ.ಟಿ.ರವಿ
Team Udayavani, Aug 1, 2020, 11:22 AM IST
ಬೆಂಗಳೂರು: ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠ ಮುಂದುವರಿಸಲು ಸರ್ಕಾರ ಬದ್ಧವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿ, ಜೆಎನ್ಯು ಕನ್ನಡ ಅಧ್ಯಯನ ಪೀಠ ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜೂನ್25 ರಂದು ವಿಶ್ವವಿದ್ಯಾಲಯದ ಕುಲಪತಿಗೆ ಪತ್ರ ಬರೆಯಲಾಗಿದೆ. ರಾಜ್ಯ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲು
ಬದ್ಧವಾಗಿದೆ ಎಂಬುದನ್ನೂ ವಿವಿ ಉಪ ಕುಲಪತಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೆಎನ್ಯು ಮಾಡಿಕೊಂಡ ಒಪ್ಪಂದದ ಮೇರೆಗೆ ಜೆಎನ್ಯು ಕನ್ನಡ ಅಧ್ಯಯನ ಪೀಠವು 2015 ಅಕ್ಟೋಬರ್ 1 ರಿಂದ ಕಾರ್ಯಾರಂಭ ಮಾಡಿದೆ. ಈ ಒಪ್ಪಂದದ ಪ್ರಕಾರ ಇಲಾಖೆಯು ವಾರ್ಷಿಕ ವಾಗಿ 43 ಲಕ್ಷ ರೂ. ಬಿಡುಗಡೆ ಮಾಡಿದೆ. ಜತೆಗೆ ಕನ್ನಡ ಅಧ್ಯಯನ ಪೀಠದ ಕೋರಿಕೆ ಯಂತೆ 5 ಕೋಟಿ ರೂ.ಆರ್ಥಿಕ ನೆರವು ನೀಡಿದ್ದು ಅದರಿಂದ ಬರುವ ಬಡ್ಡಿಯಿಂದ ಅಧ್ಯಯನ ಪೀಠ ಕಾರ್ಯನಿರ್ವ ಹಿಸುತ್ತಿದೆ.
ಜೆಎನ್ಯು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಆ.20 ರಂದು ನಿವೃತ್ತಿಯಾಗುವುದರಿಂದ ಅವರ ಜಾಗಕ್ಕೆ ನಿಯಮಾನುಸಾರ ಹೊಸದಾಗಿ ಅರ್ಹರನ್ನು ನೇಮಕಾತಿ ಮಾಡಿಕೊಳ್ಳಲು ಉಪ ಕುಲಪತಿಗಳಿಗೆ ಪತ್ರ ಬರೆದಿದ್ದು ಆ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು.