ಸಂತೋಷ್ ಆತ್ಮಹತ್ಯೆ, 40% ಕಮಿಷನ್, ಬಿಜೆಪಿ ಭ್ರಷ್ಟಾಚಾರದ ವಿರುದ್ದ ಕೈ ರಣಕಹಳೆ
ನಾಳೆಯಿಂದ "ಭ್ರಷ್ಟಾಚಾರ ಮುಕ್ತ ಕರ್ನಾಟಕ' ನಡಿಗೆ
Team Udayavani, Apr 14, 2022, 7:30 AM IST
ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿರುವ ಕಾಂಗ್ರೆಸ್, ನಾಳೆಯಿಂದ “ಭ್ರಷ್ಟಾಚಾರ ಮುಕ್ತ ಕರ್ನಾಟಕ ನಡಿಗೆ’ ಹೆಸರಲ್ಲಿ ರಾಜ್ಯಾದ್ಯಾಂತ ಪ್ರವಾಸ ಹಮ್ಮಿಕೊಂಡಿದೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಭ್ರಷ್ಟಾಚಾರ ಮುಕ್ತ ಕರ್ನಾಟಕ ನಡಿಗೆ ಕಾರ್ಯಕ್ರಮವನ್ನು ಘೋಷಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹಾಗೂ ಐವರು ಕಾರ್ಯಾಧ್ಯಕ್ಷರ ನೇತೃತ್ವದ 8 ತಂಡಗಳು ಪ್ರತ್ಯೇಕವಾಗಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಏ.15ರಿಂದ 20ರವರೆಗೆ ಪ್ರತಿ ತಂಡ ನಾಲ್ಕೈದು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.
ಇಂದು ಸಿಎಂ ನಿವಾಸಕ್ಕೆ ಘೇರಾವ್:
ರಾಜ್ಯ ಪ್ರವಾಸದ ಮುನ್ನಾ ದಿನವಾದ ಗುರುವಾರ ಮುಖ್ಯಮಂತ್ರಿಯವರು ಸರ್ಕಾರಿ ನಿವಾಸಕ್ಕೆ ಘೇರಾವ್ ಹಾಕಲು ಕಾಂಗ್ರೆಸ್ ನಿರ್ಧರಿಸಿದೆ. ಈ ವಿಚಾರವಾಗಿ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಾಳೆ ಬೆಳಗ್ಗೆ ನಡೆಯಬೇಕಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದ್ದು, ನಾಳೆ ಭ್ರಷ್ಟಾಚಾರ ಮುಕ್ತ ಕರ್ನಾಟಕ’ ಕಾರ್ಯಕ್ರಮದ ಮೂಲಕ ಬೆಳಗ್ಗೆ 10.30ಕ್ಕೆ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅಲ್ಲಿಂದ ಮುಖ್ಯಮಂತ್ರಿಗಳ ನಿವಾಸದಲ್ಲಿ ಘೇರಾವ್ ಹಾಕಲು ಪಕ್ಷದ ನಾಯಕರು ನಿರ್ಧರಿಸಿದ್ದೇವೆ ಎಂದರು.
ರಾಜ್ಯ ಪ್ರವಾಸದ ವೇಳಾಪಟ್ಟಿ
ಡಿ.ಕೆ. ಶಿವಕುಮಾರ್ ತಂಡ
ಏ.15-ಹಾವೇರಿ ಜಿಲ್ಲೆ
ಏ.16-ಗದಗ ಜಿಲ್ಲೆ
ಏ.17-ಬಾಗಲಕೋಟೆ ಜಿಲ್ಲೆ
ಏ.18-ಹುಬ್ಬಳ್ಳಿ-ಧಾರವಾಡ ನಗರ ಜಿಲ್ಲೆ
ಏ.19-ಧಾರವಾಡ ಗ್ರಾಮೀಣ ಜಿಲ್ಲೆ
ಸಿದ್ದರಾಮಯ್ಯ ತಂಡ
ಏ.15-ಚಾಮರಾಜನಗರ ಜಿಲ್ಲೆ
ಏ.16-ಮೈಸೂರು ನಗರ-ಗ್ರಾಮಾಂತರ ಜಿಲ್ಲೆ
ಏ.17-ಮಂಡ್ಯ ಜಿಲ್ಲೆ
ಏ.18-ಕೊಡಗು ಜಿಲ್ಲೆ
ಏ.19-ಹಾಸನ ಜಿಲ್ಲೆ
ಏ.20-ಚಿಕ್ಕಮಗಳೂರು ಜಿಲ್ಲೆ
ಎಂ.ಬಿ. ಪಾಟೀಲ್ ತಂಡ
ಏ.15- ಬೀದರ್ ಜಿಲ್ಲೆ
ಏ.16-ಕಲಬುರಗಿ ಜಿಲ್ಲೆ
ಏ.17-ಯಾದಗಿರಿ ಜಿಲ್ಲೆ
ಏ.18-ರಾಯಚೂರು ಜಿಲ್ಲೆ
ರಾಮಲಿಂಗಾರೆಡ್ಡಿ ತಂಡ
ಏ.15-ಬಳ್ಳಾರಿ ನಗರ-ಗ್ರಾಮಾಂತರ ಜಿಲ್ಲೆ
ಏ.16-ರಾಮನಗರ ಜಿಲ್ಲೆ
ಏ.17-ಕೋಲಾರ ಜಿಲ್ಲೆ
ಏ.18-ಚಿಕ್ಕಬಳ್ಳಾಪುರ
ಸಲೀಂ ಅಹ್ಮದ್ ತಂಡ
ಏ.15-ಬೆಂಗಳೂರು ಗ್ರಾಮಾಂತರ ಜಿಲ್ಲೆ
ಏ.16-ಚಿತ್ರದುರ್ಗ ಜಿಲ್ಲೆ
ಏ.17-ತುಮಕೂರು ಜಿಲ್ಲೆ
ಸತೀಶ್ ಜಾರಕಿಹೊಳಿ ತಂಡ
ಏ.15-ಉತ್ತರ ಕನ್ನಡ ಜಿಲ್ಲೆ
ಏ.16-ಉಡುಪಿ ಜಿಲ್ಲೆ
ಏ.17-ದಕ್ಷಿಣ ಕನ್ನಡ ಜಿಲ್ಲೆ
ಆರ್. ಧೃವನಾರಾಯಣ ತಂಡ
ಏ.15-ಕೊಪ್ಪಳ ಜಿಲ್ಲೆ
ಏ.16-ದಾವಣಗೆರೆ ಜಿಲ್ಲೆ
ಏ.17-ಶಿವಮೊಗ್ಗ ಜಿಲ್ಲೆ
ಈಶ್ವರ್ ಖಂಡ್ರೆ ತಂಡ
ಏ.15-ಬೆಳಗಾವಿ ನಗರ-ಗ್ರಾಮಾಂತರ ಜಿಲ್ಲೆ
ಏ.16-ಚಿಕ್ಕೋಡಿ ಜಿಲ್ಲೆ
ಏ.17-ವಿಜಯಪುರ ಜಿಲ್ಲೆ
ರಾಜ್ಯದ ಪ್ರಮುಖ ನಾಯಕರ ನೇತೃತ್ವದಲ್ಲಿ 7-8 ತಂಡಗಳನ್ನು ರಚಿಸಿ ಎಲ್ಲ ಜಿÇÉೆಗಳಿಗೂ ಹೋಗಿ, ಈ 40% ಸರ್ಕಾರದ ವಿರುದ್ಧ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ನಂತರ ಬ್ಲಾಕ್ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ಜನರೇ ಈ ಭ್ರಷ್ಟ ಸರ್ಕಾರವನ್ನು ಕಿತ್ತೂಗೆಯುವವರೆಗೂ ನಿ¨ªೆ ಮಾಡದೇ ಹೋರಾಟ ಮಾಡಿ ಜನರಿಗೆ ನ್ಯಾಯ ಒದಗಿಸುವ ಕೆಲಸ ಪಕ್ಷ ಮಾಡುತ್ತದೆ.
-ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ.
ಸಂತೋಷ್ ಪಾಟೀಲ್ ಬಿಜೆಪಿ ಭ್ರಷ್ಟಾಚಾರ ವ್ಯವಸ್ಥೆಗೆ ಬಲಿಯಾಗಿದ್ದಾರೆ. ಬಿಜೆಪಿ ಭ್ರಷ್ಟಾಚಾರಕ್ಕೆ ತನ್ನ ಕುಟುಂಬದ ಸದಸ್ಯನನ್ನೇ ಹತ್ಯೆ ಮಾಡಿದೆ. ಹೀಗಾಗಿ ಭ್ರಷ್ಟಾಚಾರ ಮುಕ್ತ ಕರ್ನಾಟಕ ನಡಿಗೆ’ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ನಿವಾಸಕ್ಕೆ ಘೇರಾವ್ ಹಾಕಲಾಗುವುದು. ಇದೇ 15ರಿಂದ 5 ದಿನಗಳ ಕಾಲ ನಿತ್ಯ 5-6 ಜಿಲ್ಲೆಗಳಲ್ಲಿ ನಮ್ಮ ನಾಯಕರ ತಂಡಗಳು ಪ್ರವಾಸ ಮಾಡಿ ಹೋರಾಟ ಮಾಡಲಿದ್ದಾರೆ. ಈಶ್ವರಪ್ಪ ಬಂಧನ ಆಗುವವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ. ಬೊಮ್ಮಾಯಿ ಅವರ ಸರ್ಕಾರದ ಭ್ರಷ್ಟಾಚಾರವನ್ನು ತೊಳೆದು ಹಾಕುವವರೆಗೂ ನಾವು ವಿರಮಿಸುವುದಿಲ್ಲ. ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ.
– ರಣದೀಪ್ ಸಿಂಗ್ ಸುರ್ಜೇವಾಲಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ.
ರಾಜ್ಯವು ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ನಲುಗಿದ್ದು, ಅಭಿವೃದ್ಧಿ ಕುಂಠಿತವಾಗಿದೆ. ಗುಣಮಟ್ಟದ ಕೆಲಸ ಆಗಲು ಸಾಧ್ಯವಿಲ್ಲ, ಎಲ್ಲ ಇಲಾಖೆಗಳಲ್ಲಿ ರಾಜ್ಯದ ಲೂಟಿ ನಡೆಯುತ್ತಿದ್ದು, ಈ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದಾರೆ. ಪ್ರಧಾನಿ ನಾನು ಚೌಕಿದಾರ್’ ಎನ್ನುತ್ತಾರೆ. ಕೆಂಪಣ್ಣ ಅವರು 40% ಬಗ್ಗೆ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜನರ ಬೆವರಿನ ತೆರಿಗೆ ಹಣ ಲೂಟಿ ವಿರುದ್ಧ, ಈ ಸರ್ಕಾರ ಕಿತ್ತು ಹಾಕಿ ಎಂದು ಜನರಿಗೆ ಹೇಳಲು ಈ ಹೋರಾಟ.
– ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ.